ಕೋಲ್ಕತಾ: ವಿಧಾನಸಭೆ ಉಪ ಚುನಾವಣೆಯ ಹಿಂದಿನ ದಿನವೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಭಟ್ಪರಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಟ್ಪರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಸ್ಥಳದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಷ್ಟೆ ಅಲ್ಲದೆ, ಗಲಾಟೆಯಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ಕೂಡ ನಡೆಸಲಾಗಿದ್ದು, ಭಾರೀ ಹಿಂಸಾಚಾರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಗಾಹುತಿಯಾಗಿದೆ.
ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಇಲ್ಲಿ ಗಲಾಟೆ ನಡೆಯಬಹುದು ಎಂದು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಜೊತೆಗೆ ಅರೆಸೇನಾ ಪಡೆಗಳ 800 ತುಕಡಿಗಳನ್ನು ಚುನಾವಣೆ ನಡೆಯುತ್ತಿರುವ 9 ಕ್ಷೇತ್ರದಲ್ಲಿಯೂ ನಿಯೋಜಿಸಲಾಗಿದೆ.
ಭಟ್ಪಾರ ಕ್ಷೇತ್ರದಿಂದ ಅರ್ಜುನ್ ಸಿಂಗ್ ರಾಜೀನಾಮೆ ನೀಡಿದ್ದು, ಬ್ಯಾರಕ್ಪೋರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು. ಹಾಗೆಯೇ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿ ಜೈಲಿನಿಂದ ಬಿಡುಗಡೆಯಾದ ಮೂರು ವರ್ಷಗಳ ನಂತರ, ಬಂಗಾಳ ಸರ್ಕಾರದ ಮಾಜಿ ಮಂತ್ರಿ ಮದನ್ ಮಿತ್ರ, ಭಟ್ಪಾರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಚುನಾವಣೆ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಬಾರಿ 9 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಬಹುತೇಕ ಕಡೆ ಟಿಎಂಸಿ ಪಕ್ಷದ ಪ್ರಬಲ್ಯ ಹೆಚ್ಚಾಗಿದೆ. ಆದರೆ ಟಿಎಂಸಿ ಪ್ರಬಲ್ಯ ಹೊಂದಿರುವ ಕ್ಷೇತ್ರಗಳನ್ನು ತಮ್ಮ ವಶಕ್ಕೆ ಪಡೆಯಬೇಕೆಂದು ಬಿಜೆಪಿ ಪ್ರಯತ್ನ ಪಡುತ್ತಿರುವುದರಿಂದ ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
Pre-poll violence in West Bengal again – clashes and arson in Barrackporehttps://t.co/YG0cjYaI1s
— Republic (@republic) May 18, 2019
ಲೋಕಸಮರದ 7ನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಇದೇ ಕಾರಣಕ್ಕೆ ಬಿಜೆಪಿ-ಟಿಎಂಸಿ ನಡುವೆ ಗಲಾಟೆ ನಡೆದಿತ್ತು. 8 ಸ್ಥಾನಗಳ ಪೈಕಿ ಜಾಧವಪುರ ಹೊರತುಪಡಿಸಿ ಉಳಿದ 7 ಕಡೆ ಬಿಜೆಪಿ-ಟಿಎಂಸಿ ಜತೆಗೆ ಕಾಂಗ್ರೆಸ್ ಮತ್ತು ಎಡಪಂತಿ ಪಕ್ಷಗಳೂ ಸ್ಪರ್ಧೆಗೆ ಮುಂದಾದ ಕಾರಣಕ್ಕೆ ಚುನಾವಣಾ ಕಣ ಮತ್ತಷ್ಟು ರಂಗೇರಿತ್ತು. ಈ ನಡುವೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸ್ಪರ್ಧೆಯಿಂದಾಗಿ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ.