– ಭೀಕರವಾಗಿ ಡ್ರೈವರ್ ಸಾವು
– ಏರ್ಬ್ಯಾಗ್ನಿಂದ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿ ಪಾರು
ಬೆಂಗಳೂರು: ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರಿನ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಇಂದಿರಾನಗರದ ಬಿನ್ನಮಂಗಲ ಸಿಗ್ನಲ್ ಬಳಿ ನಡೆದಿದೆ.
ಸಿಗ್ನಲ್ನಲ್ಲಿ ನಿಂತಿದ್ದ ಎರಡು ಕಾರು ಮತ್ತು ಒಂದು ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೊದಲಿಗೆ ನಿಂತಿದ್ದ ಇಂಡಿಕಾ ಕಾರಿನ ಚಾಲಕ ಮುಂದೆ ಇದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರು ಸಂಪೂರ್ಣವಾಗಿ ಲಾರಿ ಕೆಳಗೆ ಸೇರಿಕೊಂಡಿದ್ದು, ಅಪ್ಪಚ್ಚಿಯಾಗಿದೆ.
ಲಾರಿ ಡಿಕ್ಕಿಯಾದ ರಭಸಕ್ಕೆ ಇಂಡಿಕಾ ಕಾರು ಡ್ರೈವರ್ ಭೀಕರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಕಾರಿನಲ್ಲಿದ್ದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಆ ಕಾರಿನ ಮುಂದಿದ್ದ ಮತ್ತೊಂದು ಇಟಿಎಸ್ ಕಾರು ಕೂಡ ಸಂಪೂರ್ಣವಾಗಿ ಜಖಂ ಆಗಿದ್ದು, ಏರ್ ಬ್ಯಾಗ್ ಓಪನ್ ಆದ ಪರಿಣಾಮ ಆ ಕಾರಿನಲ್ಲಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.
ಈ ಅಪಘಾತದ ನಂತರ ಸಿಲಿಂಡರ್ ತುಂಬಿದ್ದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಪರಿಣಾಮ ಇಡೀ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿದ್ದು, ಸ್ಥಳಕ್ಕೆ ಬಂದ ಇಂದಿರಾನಗರ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.