ಹಾಸನ: ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಾರೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾಂಧಿ ವೃತ್ತದ ನಿವಾಸಿ ಜಯರಾಮ್ ಎಂಬುವರ ಮಾರುತಿ ಓಮ್ನಿ ಕಾರು ಅವಘಡದಿಂದ ಸುಟ್ಟು ಕರಕಲಾಗಿದೆ. ಜಯರಾಮ್ ಅವರು ತಮ್ಮ ಮನೆಯ ಗೃಹಪ್ರವೇಶಕ್ಕೆ ಬೇಕಾದ ವಸ್ತುಗಳನ್ನು ಕಾರಿನಲ್ಲಿಯೇ ತಂದು ಮನೆಯ ಬಳಿ ನಿಲ್ಲಿಸಿದ್ದರು. ನಂತರ ದಿನಸಿ ಸಾಮಾನುಗಳನ್ನು ಮನೆಯ ಒಳಗೆ ಸಾಗಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಸಿಲಿಂಡರ್ ಸ್ಫೋಟದ ಪರಿಣಾಮ ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಅಪಾಯ ಸಂಭವಿಸಿಲ್ಲ.