ಚಿಕ್ಕಬಳ್ಳಾಪುರ: ಹೆದ್ದಾರಿಯ ಸೇತುವೆ ಮೇಲೆ ಸಾಗುತ್ತಿದ್ದ ಕಾರೊಂದು ಕೆಳಗೆ ಉರುಳಿ ಬಿದ್ದು ಅಪಘಾತಕ್ಕೀಡಾಗಿದ್ದು, ಪವಾಡಸದೃಶ ರೀತಿಯಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ.
ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗ ಮಧ್ಯೆ ಶ್ರೀನಿವಾಸ ಸಾಗರ ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲಿಂದ ಕಾರು ಬಿದ್ದಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಮಂಚೇನಹಳ್ಳಿ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಉರುಳಿ ಬಿದ್ದಿದೆ.
ಘಟನೆಯಲ್ಲಿ ಕಾರು ಚಾಲಕ ಸಾದೇನಹಳ್ಳಿ ಗ್ರಾಮದ ಶ್ರೀನಿವಾಸ್ ಸೇರಿದಂತೆ ಮಗು ಹಾಗೂ ಮತ್ತೊಬ್ಬರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಿಂದ 30 ಅಡಿ ಕೆಳಗೆ ಕಾರು ಬಿದ್ದಿದ್ದರೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರೋದು ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ.
ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. 3-4 ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆದು, ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ಅರ್ಧಂಬರ್ಧ ಮಾಡಿ ಗುತ್ತಿಗೆದಾರ ಕಾರಣಾಂತರಗಳಿಂದ ಕೆಲಸ ಕೈ ಬಿಟ್ಟಿದ್ದಾನೆ. ಹೀಗಾಗಿ ಹಲವೆಡೆ ಅಗಲದ ರಸ್ತೆ ಇದ್ದರೂ ಸೇತುವೆಗಳು ಇರುವ ಜಾಗದಲ್ಲಿ ಸರಿಯಾಗಿ ರಸ್ತೆ ನಿರ್ಮಾಣ ಕಾರ್ಯ ಆಗಿಲ್ಲ.
ಹೀಗಾಗಿ ಹಳೆಯ ಸೇತುವ ಕೇವಲ 10 ಅಡಿ ಮಾತ್ರ ಇದ್ದು, 10 ಅಡಿಯ ರಸ್ತೆಯ ಮೇಲೆ ಒಂದು ವಾಹನ ಸಾಗಿದರೆ ಮತ್ತೊಂದು ವಾಹನ ಸಾಗಲು ಜಾಗವಿರುವುದಿಲ್ಲ. ಹೀಗಾಗಿ ಕಿರಿದಾದ ಸೇತುವೆ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.