ಮೈಸೂರು: ಮೈಸೂರು ದಸರಾ ಮಹೋತ್ಸವ 2018 ಕ್ಕೆ ದಿನಗಣನೆ ಶುರುವಾಗಿದ್ದು, ಇಂದು ಕ್ಯಾಪ್ಟನ್ ಅರ್ಜುನನಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ.
ಜಂಬೂ ಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿ ಕಟ್ಟುವ ಕಾರಣ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಪೂಜೆ ಬಳಿಕ ಅರ್ಜುನನಿಗೆ ಮರದ ಅಂಬಾರಿಯನ್ನು ಮಾವುತರು ಕಟ್ಟಿದರು. ಸುಮಾರು 280 ಕೆ.ಜಿ ತೂಕದ ಮರದ ಅಂಬಾರಿಯ ಜೊತೆಗೆ, 350 ರಿಂದ 400 ಕೆ.ಜಿ ಮರಳಿನ ಚೀಲ ಹೊರಿಸಿ ತಾಲೀಮು ನಡೆಸಿದರು. ಒಟ್ಟು ಅರ್ಜುನ 650 ರಿಂದ 700 ಕೆ.ಜಿ ಭಾರ ಹೊತ್ತು ಸಾಗಿದನು.
ಮಂಗಳವಾರ ಮಹತ್ಮಾ ಗಾಂಧೀಜಿ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಭಾರ ಹೊರಿಸದೆ ಆನೆಗಳು ಬರಿ ಮೈಯಲ್ಲಿ ತಾಲೀಮು ನಡೆಸಿದ್ದವು. ಈವರೆಗೂ 400 ರಿಂದ 500 ಕೆಜಿ ತೂಕದ ಭಾರ ಹೊತ್ತು ತಾಲೀಮು ನಡೆಸುತ್ತಿದ್ದ ಆನೆಗಳು, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಹಿಂಸೆ ದೃಷ್ಟಿಯಿಂದ ಆನೆಗೆ ಭಾರ ಹೊರಿಸದೆ ತಾಲೀಮು ನಡೆಸಲಾಗಿತ್ತು.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗಾಂಧಿ ಜಯಂತಿ ಇದ್ದರೆ ಭಾರವಿಲ್ಲದೇ ತಾಲೀಮು ನೀಡುವ ಅಧಿಕಾರಿಗಳು, ಗಾಂಧೀಜಿಗೆ ಗೌರವ ಸಲ್ಲಿಸುವ ಸಲುವಾಗಿ ಖಾಲಿ ಮೈಯಲ್ಲಿ ಭಾರವಿಲ್ಲದೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳು ಸಾಗಿದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv