ಬಾಗಲಕೊಟೆ: ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಬಳಿ ನಿಂತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ನಡೆದಿದೆ.
ರಜಾಕ್ ತಾಂಬೊಳೆ(54), ನಾಶಿರ್ ಮುಲ್ಲಾ(42), ಮಲ್ಲಪ್ಪ ಮಳಲಿ(42), ರಾಮಸ್ವಾಮಿ(36) ಮೃತರು. ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಕ್ಯಾಂಟರ್ನಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಮಾರಾಟ ಮಾಡಲು ಹೊರಟಿದ್ದರು. ಆದರೆ ಬೀಳಗಿ ತಾಲೂಕಿನ ಬಾಡಗಂಡಿ ಬಳಿ ವಾಹನ ಪಂಚರ್ ಆಗಿದೆ. ಇದರಿಂದಾಗಿ ಚಾಲಕ ನಾಶೀರ್ ಮುಲ್ಲಾ ವಾಹನ ಮಾಲೀಕ ಮಲ್ಲಪ್ಪ ಅವರಿಗೆ ಫೋನ್ ಮಾಡಿ ಹೇಳಿದ್ದಾರೆ.
ಇದರಿಂದಾಗಿ ಬೀಳಗಿ ಪಟ್ಟಣದಿಂದ ರಾಮಸ್ವಾಮಿ ಟಂಟಂನಲ್ಲಿ ಟೈರ್ ಹಾಕಿಕೊಂಡು ಒಟ್ಟು ಐವರು ತೆರಳಿದ್ದಾರೆ. ಒಬ್ಬ ಸ್ಟೇಪ್ನಿ ಟೈರ್ ಜೋಡಿಸುತ್ತಿದ್ದು, ಉಳಿದ ನಾಲ್ವರು ವಾಹನ ಪಕ್ಕ ನಿಂತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಇದನ್ನೂ ಓದಿ: ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು
ಬೀಳಗಿ ಆಸ್ಪತ್ರೆಯಲ್ಲಿ ನಾಲ್ವರ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಂಎಲ್ಸಿ ಹನಮಂತ ನಿರಾಣಿ ಬೀಳಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಪೊಲೀಸರಿಂದ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ