ಚೆನ್ನೈ: ನಾನು ಚೌಕಿದಾರ್ ಅಲ್ಲ, ಬ್ರಾಹ್ಮಣ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ತಮಿಳು ವಾಹಿನಿಯೊಂದರ ಸಂದರ್ಶನದಲ್ಲಿ, ನಿಮ್ಮ ಟ್ವೀಟ್ ಖಾತೆಯ ಹೆಸರಿನ ಮುಂದೆ ಚೌಕಿದಾರ್ ಅಂತ ಯಾಕೆ ಸೇರಿಸಿಲ್ಲ ಎಂದು ವರದಿಗಾರ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ನಾನು ಚೌಕಿದಾರ್ ಆಗುವುದಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ. ಹೀಗಾಗಿ ಬ್ರಾಹ್ಮಣರು ಚೌಕಿದಾರ್ ಆಗಲು ಸಾಧ್ಯವಿಲ್ಲ. ಇದು ಸತ್ಯ ಕೂಡ ಎಂದರು.
Frank ஆ பேசராப்ல. Wish he campaigns for BJP in TN ???? pic.twitter.com/TkQCqbX66S
— Dhanapal (@balu_twits) March 24, 2019
ಚೌಕಿದಾರ್ ಏನು ಮಾಡಬೇಕು ಎನ್ನುವ ಆದೇಶವನ್ನು ನಾನು ನೀಡುತ್ತೇನೆ. ನಾವು ಹೇಳಿದಂತೆ ಚೌಕಿದಾರ್ ಕೇಳಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಾಗಿ ನಾನು ಚೌಕಿದಾರ್ ಆಗಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ. ಸಂಸದರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಅವರು ಮಾರ್ಚ್ 16ರಂದು `ನಾನೂ ಕೂಡ ಚೌಕಿದಾರ’ #MainBhiChowkidar ಎಂದು ಹೇಳಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರಿನ ಮುಂದೆ `ಚೌಕಿದಾರ’ ಎಂದು ಸೇರಿಸಿಕೊಂಡಿದ್ದರು. ಮೋದಿ ಹೆಸರು ಬದಲಾಯಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ `ನಾನೂ ಕೂಡ ಚೌಕಿದಾರ’ #MainBhiChowkidar ಆಂದೋಲನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಶ್ವದಲ್ಲಿ ಟ್ರೆಂಡ್ ಆಗಿತ್ತು. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರು ಚೌಕಿದಾರರೇ ಎಂದು ಮೋದಿ ಹೇಳಿದ್ದರು.
ಕೋಲ್ಕತ್ತಾದಲ್ಲಿ ಶನಿವಾರ ನಡೆದಿದ್ದ ಸಭೆಯೊಂದರಲ್ಲಿ ಮಾತನಾಡಿದ ಅವರು, ಜಿಡಿಪಿ ಲೆಕ್ಕಾಚಾರದಂತೆ ಅಮೆರಿಕ ಮತ್ತು ಚೀನಾ ಬಳಿಕ ಭಾರತ ಮೂರನೇ ದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದ 5ನೇ ದೊಡ್ಡ ಆರ್ಥಿಕತೆ ಎಂದು ಏಕೆ ಕರೆಯುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅರ್ಥಶಾಸ್ತ್ರದ ಕುರಿತು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು.