ಗದಗ: ಸಾಮಾನ್ಯ ಜನರು ಹೋಟೆಲ್ನಲ್ಲಿ ಊಟಮಾಡುವಂತಿಲ್ಲ. ನಾವು ಊಟ ತಿಂದ್ರೆ ನಮ್ಮ ಜೊತೆಗೆ ನರೇಂದ್ರ ಮೋದಿ, ಅಮಿತ್ ಶಾ ಕೂಡ ತಿಂತಾರೆ. ಅವರಿಬ್ಬರದ್ದೂ ಬಿಲ್ ನಾವೇ ಕಟ್ಟಬೇಕು. ಹೋಟೆಲ್ನಲ್ಲಿ ಜಿಎಸ್ಟಿ ರೂಪದಲ್ಲಿ ಕಟ್ಟುವ ತೆರಿಗೆ ಅವರಿಗೆ ಹೋಗುತ್ತೆ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್ಗಳಂತಹ ಹೋರಾಟ ನಡೆಸುವವರಿಗೆ ನೇರವಾಗಿ ಬಿಜೆಪಿ ಸಪೋರ್ಟ್ ಮಾಡ್ತಿದೆ. ಕೇವಲ ಜೈಕಾರ ಹಾಕುವುದರಿಂದ ಹೊಟ್ಟೆ ತುಂಬಲ್ಲ. ಜೈಕಾರದಿಂದ ಕೆಲಸ ಸಿಗುತ್ತಾ? ಬೆಲೆ ಏರಿಕೆ ಇಳಿಯುತ್ತಾ? ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದೆ. ಈಶ್ವರಪ್ಪ, ಸಿ.ಟಿ.ರವಿ, ಆರಗ ಜ್ಞಾನೇಂದ್ರ ಇವರಿಗೆಲ್ಲ ತಲೆ ಸರಿ ಇಲ್ಲ ಅನ್ಸುತ್ತೆ. ಆರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ಕಿಲ್ಲ. ಬಿಜೆಪಿ ರಕ್ತದಲ್ಲೇ ಸುಳ್ಳು ಹೇಳುವುದು, ಕ್ಷಮೆ ಕೇಳುವುದು ಬಂದಿದೆ. 25 ಜನ ದಂಡ ಪಿಂಡಗಳನ್ನು ಲೋಕಸಭಾ ಸದಸ್ಯರಾಗಿ ಇಲ್ಲಿಂದ ಗೆಲ್ಲಿಸಿ ಕಳುಹಿಸಿದ್ದಾರೆ. ಅವರನ್ನು ಕಳುಹಿಸಿದ್ದು, ಕರ್ನಾಟಕದ ಪರ ಧ್ವನಿ ಎತ್ತಲಿ ಅಂತ. ಆದರೆ ಅವರು ಇಲ್ಲಿ ಕೋಮುಗಲಭೆ, ಗಲಾಟೆಗಳಿಗೆ ಕುಮ್ಮುಕ್ಕು ಕೊಡೋದನ್ನು ಬಿಡಬೇಕು. ಬಿಜೆಪಿ ಅಂದ್ರೆ ಬೆಲೆ ಏರಿಕೆ, ನರೇಂದ್ರ ಮೋದಿ ಅಂದ್ರೆ ಬೆಲೆ ಏರಿಕೆ. ಬೇರೆ ರಾಜ್ಯಗಳಲ್ಲಿ ನಾವು ಹೋದಾಗ ಕರ್ನಾಟಕ ಕೈಸಾ ಹೈ ಅಂತಾರೆ. ಕರ್ನಾಟಕ ಅಂದ್ರೆ ನಾಟಕ ಮಾಡೋರು ಎನ್ನುವ ಟೈಟಲ್ ಬಿಜೆಪಿ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವ್ರೇ ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗೋದು ಬೇಡ: ದಿನೇಶ್ ಗುಂಡೂರಾವ್
ಪ್ರದೇಶ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿ, ಬೆಂಗಳೂರ ಚಂದ್ರು ಕೊಲೆ ಸ್ಟೇಟ್ಮೆಂಟ್ ಕರೆಕ್ಟ್ ಮಾಡೋದಕ್ಕೆ ಯಾರೋ ಒಬ್ಬನ್ನ ರೆಡಿ ಮಾಡಿ ಟಿವಿಯಲ್ಲಿ ಬಿಟ್ಟಿದ್ದಾರೆ. ಆರಗ ಜ್ಞಾನೇಂದ್ರ ಒಳ್ಳೆ ಫಸ್ಟ್ ಸ್ಟ್ಯಾಂಡರ್ಡ್ ಹುಡುಗರಂತೆ ಆಡ್ತಾರೆ. ಗೃಹ ಸಚಿವರು ಬೆಳಗ್ಗೆ ಒಂದು ಮಧ್ಯಾಹ್ನ, ಸಂಜೆ ಒಂದೊಂದು ಹೇಳಿಕೆ ಕೊಡ್ತಾರೆ. ಯಾವುದೇ ಕೊಲೆ, ಹಲ್ಲೆ ಪ್ರಕರಣಗಳಾಗಲಿ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದರೆ ಅದಕ್ಕೆ ಒಂದು ಕಮ್ಯೂನಲ್ ಕಲರ್ ಕೊಡೋದು ಸರಿಯಲ್ಲ. ಬೆಲೆ ಏರಿಕೆ ಮುಚ್ಚಿ ಹಾಕಲು ಬಿಜೆಪಿ ಕೋಮು ಗಲಭೆ ಸೃಷ್ಟಿಸಲು ಟ್ರೈ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: BJP, RSS ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದೆ: ಬಿ.ಕೆ ಹರಿಪ್ರಸಾದ್
ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಯುವಮೋರ್ಚ ಘಟಕ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.