ಶಿವಮೊಗ್ಗ: ಕೋರ್ಟ್ ಕೇಸ್ ಮುಗಿಸಿಕೊಂಡು ಹೋಗುತ್ತಿದ್ದ ಉದ್ಯಮಿ ಮೇಲೆ ಕೌಟುಂಬಿಕ ಕಾರಣದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಸೊರಬದ ಉದ್ಯಮಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದೊಡ್ಮನೆ ಶ್ರೀಧರ್ ಹಲ್ಲೆಗೆ ಒಳಗಾದವರು. ಶ್ರೀಧರ್ ಅವರ ಅಕ್ಕ ಜಯಶೀಲಮ್ಮ ಮತ್ತು ಅವರ ಮಕ್ಕಳಾದ ಪ್ರಕಾಶ್, ರಾಘವೇಂದ್ರ, ಪದ್ಮಾಕರ ಈ ಕೃತ್ಯ ಎಸಗಿದ್ದಾರೆ.
ಶ್ರೀಧರ್ ಹಾಗೂ ಜಯಶೀಲಮ್ಮ ಅವರ ನಡುವೆ ಆಸ್ತಿ ಸಂಬಂಧಿಸಿದ ವ್ಯಾಜ್ಯ ಶಿಕಾರಿಪುರ ಕೋರ್ಟ್ನಲ್ಲಿ ನಡೆಯುತ್ತಿತ್ತು. ಈ ಪ್ರಕರಣದ ವಿಚಾರಣೆಗಾಗಿ ಸೋಮವಾರ ಶ್ರೀಧರ್ ಅವರು ಶಿಕಾರಿಪುರಕ್ಕೆ ಬಂದಿದ್ದರು. ಕೋರ್ಟ್ ಕಲಾಪ ಮುಗಿಸಿ ಶ್ರೀಧರ್ ತಮ್ಮ ಕಾರಿನಲ್ಲಿ ಹೊರ ಬಂದಾಗ ಮಧ್ಯಾಹ್ನ ಆಟೋ ಸ್ಟ್ಯಾಂಡ್ ಬಳಿ ಏಕಾಏಕಿ ದಾಳಿ ಮಾಡಿದ ಜಯಶೀಲಮ್ಮ ಮತ್ತು ಅವರ ಮಕ್ಕಳು ಕಾರಿನ ಗಾಜು ಪುಡಿಪುಡಿ ಮಾಡಿ, ಕಲ್ಲುಗಳಿಂದ ಶ್ರೀಧರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ದಾಳಿಯಿಂದಾಗಿ ಶ್ರೀಧರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಶ್ರೀಧರ್ ಮೃತಪಟ್ಟಿದ್ದಾರೆ ಎಂದು ಭಾವಿಸಿ ಅವರು ಸ್ಥಳದಿಂದ ಪಲಾಯನ ಮಾಡಿದ್ದಾರೆ. ಗಾಯಗೊಂಡಿದ್ದ ಶ್ರೀಧರ್ ಅವರನ್ನು ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದು, ಸದ್ಯಕ್ಕೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.