ಹುಬ್ಬಳ್ಳಿ: ಟೈರ್ ಬ್ಲಾಸ್ಟ್ (Tire Blast) ಆದ ಪರಿಣಾಮ ಬಸ್ (Bus) ಪಲ್ಟಿಯಾಗಿ ಚಾಲಕ (Driver) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸ್ನಲ್ಲಿ ಸಿಲುಕಿ ಹೊರಬರಲಾಗದೆ ಪ್ರಯಾಣಿಕರು (Passengers) ಪರದಾಡಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಾಗುತ್ತಿದ್ದ ಬಸ್ ಶೆರೆವಾಡ ಸಮೀಪ ಏಕಾಏಕಿ ಮುಂದಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಬಸ್ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಘಟನೆಯಿಂದ ಚಾಲಕ ರವೀಂದ್ರ ಬಿಂಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬಸ್ ಪಲ್ಟಿಯಾದ ವೇಳೆ ಬಸ್ಸಿನ ಸೀಟು, ಕಿಟಕಿ ಹಾಗೂ ಬಿಡಿ ಭಾಗಗಳ ನಡುವೆ ಪ್ರಯಾಣಿಕರು ಸಿಲುಕಿ ಪರದಾಡಿದ್ದಾರೆ. ನಮ್ಮನ್ನು ಎಬ್ಬಿಸಿ ಎಂದು ಗಾಯಾಳುಗಳು ಅಂಗಲಾಚಿದ್ದು, ಕೂಡಲೇ ಸುದ್ದಿ ತಿಳಿದ ಸ್ಥಳೀಯರು ಜೆಸಿಬಿ ತಂದು ಬಸ್ ಎತ್ತಿದ್ದಾರೆ. ಇದನ್ನೂ ಓದಿ: ಕಾರು ಮಾಲೀಕರೇ ಹುಷಾರ್ – ಮೈಸೂರಿನಲ್ಲಿ ಶುರುವಾಗಿದೆ ಕಳ್ಳರ ಹಾವಳಿ
ಅವಘಡದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ವಶ