ಬಳ್ಳಾರಿ: ನಗರದ ಕೂಳೂರು ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಬಳ್ಳಾರಿಯಿಂದ ಸಿರಗುಪ್ಪಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಾವಣಗೇರಿ ಮೂಲದ ಕಾರು ಸಿರಗುಪ್ಪ ಕಡೆಯಿಂದ ಬಳ್ಳಾರಿ ಕಡೆಗೆ ಆಗಮಿಸುತ್ತಿತ್ತು.
ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಬಾಲಕ, ಇಬ್ಬರು ಯುವಕರು ಸೇರಿದಂತೆ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರಿನಲ್ಲಿದ್ದವರ ಹೆಸರು ವಿಳಾಸ ಇನ್ನೂ ತಿಳಿದುಬಂದಿಲ್ಲ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕುರುಗೋಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಕಾರಿನಲ್ಲಿದ್ದವರ ಶವಗಳು ಹೊರಬರದಷ್ಟು ನುಜ್ಜುಗುಜ್ಜಾಗಿವೆ.
ಬಳ್ಳಾರಿ ಸಿರಗುಪ್ಪ ರಸ್ತೆ ಸಹ ಸಂಪೂರ್ಣ ಜಾಮ್ ಆಗಿತ್ತು. ಘಟನೆ ಬಗ್ಗೆ ಕುರುಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.