ಭೋಪಾಲ್: ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ ಮಗುವನ್ನ ಜೀವಂತವಾಗಿ ಹೊರತೆಗೆದಿರೋ ಘಟನೆ ಮಂಗಳವಾರದಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಘಸ್ ಗ್ರಾಮದ ಸ್ಮಶಾನದಲ್ಲಿ ಮಗುವೊಂದು ಅಳೋದನ್ನ ಕೇಳಿ ಕೆಲವು ಮಕ್ಕಳು ಈ ವಿಷಯವನ್ನ ತಿಳಿಸಿದ್ದಾರೆ. ನಂತರ ಗಂಡ ಹೆಂಡತಿ ಇಬ್ಬರು ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ.
ಸಣ್ಣ ದಿಬ್ಬವೊಂದರಿಂದ ಮಗುವಿನ ಅಳು ಕೇಳಿಬರ್ತಿದೆ ಎಂದು ಕೇಳಿ 32 ವರ್ಷದ ಶೇರ್ ಸಿಂಗ್ ಶಾಕ್ ಆಗಿದ್ರು. ನಂತರ ಅವರ ಹೆಂಡತಿ ಸುನಿತಾ ಜೊತೆ ಸ್ಥಳಕ್ಕೆ ಹೋಗಿದ್ರು.”ನಾವು ಕೈಯಿಂದ ಮಣ್ಣನ್ನು ತೆಗೆಯಲು ಶುರು ಮಾಡಿದೆವು. ಒಳಗೆ ಅಳುತ್ತಿದ್ದ ನವಜಾತ ಗಂಡು ಮಗು ಸಿಕ್ಕಿತು. ನಂತರ ಒಜ್ಹಾರ್ ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ವಿ” ಎಂದು ಶೇರ್ ಸಿಂಗ್ ಹೇಳಿದ್ದಾರೆ.
ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಮಗುವಿಗೆ ಚಿಕಿತ್ಸೆ ನೀಡ್ತಿರೋ ಮಕ್ಕಳ ತಜ್ಞರಾದ ರೂಪ್ ಸಿಂಗ್ ಭದಾಲೆ ಈ ಬಗ್ಗೆ ಹೇಳಿಕೆ ನೀಡಿದ್ದು, ಮಗು ಜನಿಸಿ 10 ದಿನಗಳಾಗಿರಬಹುದು. ಮಗುವಿಗೆ ಹುಳುಗಳು ಕಚ್ಚಿದ್ದು, ಜ್ವರ ಹಾಗೂ ನೆಗಡಿಯಿಂದ ಬಳಲುತ್ತಿದೆ. ಆದ್ರೆ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. ಮಗುವಿನ ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಲು ಆಸ್ಪತ್ರೆಗಳ ದಾಖಲೆಗಳನ್ನ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಮೂವರು ಹೆಣ್ಣು ಮಕ್ಕಳನ್ನ ಹೊಂದಿರೋ ಶೇರ್ ಸಿಂಗ್ ದಂಪತಿ, ಈ ಮಗುವನ್ನ ಆ ದೇವರೇ ನಮಗಾಗಿ ಕಳಿಸಿದ್ದಾನೆ ಎಂದು ಭಾವಿಸಿದ್ದು, ಮಗುವನ್ನ ದತ್ತು ಪಡೆಯಲು ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ.