– 25 ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲೆ ಎತ್ತಿದ್ದೇವೆ; ಬಜೆಟ್ ಭಾಷಣದಲ್ಲಿ ಘೋಷಣೆ
ನವದೆಹಲಿ: ಯಂಗ್ ಇಂಡಿಯಾ, ಉದ್ಯೋಗ ಸೃಷ್ಟಿ, ಆರೋಗ್ಯ, ದೇಶದ ರಕ್ಷಣೆಯೊಂದಿಗೆ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಗುರಿಯಾಗಿಸಿ ಕೇಂದ್ರ ಸರ್ಕಾರ 2026-27 ರ ಬಜೆಟ್ ಪ್ರಸ್ತುತ ಪಡಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಿದ್ದಾರೆ. ದೇಶದ ಇತಿಹಾಸದಲ್ಲಿ 2ನೇ ಬಾರಿಗೆ ಭಾನುವಾರದಂದೇ ಮಂಡನೆಯಾಗಿದ್ದು, ಮೂರು ಕರ್ತವ್ಯಗಳನ್ನು ಉಲ್ಲೇಖಿಸಲಾಗಿದೆ.
ಆರ್ಥಿಕ ಬೆಳವಣಿಗೆಗಳ ವೇಗಗೊಳಿಸುವುದರ ಜೊತೆ ಸ್ಥಿರತೆ, ಜನತೆ ಆಕಾಂಕ್ಷೆಗಳನ್ನ ಈಡೇರಿಸುವುದು ಹಾಗೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. 2026ರ ಬಜೆಟ್ ಅನ್ನು ಯುವಶಕ್ತಿ ಮುನ್ನಡೆಸಲಿದೆ ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ.

ಈ ಬಾರಿ 49 ಲಕ್ಷದ 64 ಸಾವಿರದ 842 ಕೋಟಿ ಗಾತ್ರದ ಬಜೆಟ್ ಆಗಿದೆ. ರಕ್ಷಣೆ, ರೈಲ್ವೇ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಡುವ ಮೂಲಕ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಉದ್ಯೋಗ ಸೃಷ್ಟಿಗೆ ಸರ್ಕಾರ ಆದ್ಯತೆ ಕೊಟ್ಟಿದೆ. ಇನ್ನು, ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ, ಏಪ್ರಿಲ್ 1 ರಿಂದ ಹೊಸ ತೆರಿಗೆ ನೀತಿ ಬರಲಿದೆ. ಇದರನ್ವಯ ಹಾಲಿ ಇರುವಂತೆ 12.75 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲದಿದ್ದರೂ, ಅದರ ಮೇಲ್ಪಟ್ಟರೆ ತೆರಿಗೆ ಅನ್ವಯ ಆಗಲಿದೆ.
ತಪ್ಪಾಗಿ ಐಟಿ ಸಲ್ಲಿಸಿದ್ರೆ ದಂಡವಷ್ಟೇ; ಶಿಕ್ಷೆ ಇಲ್ಲ…
> ತೆರಿಗೆ ಪದ್ಧತಿ ವಿಚಾರದಲ್ಲಿ ಕೆಲವೊಂದು ಬದಲಾವಣೆ
> ತಪ್ಪಾಗಿ ಐಟಿ ಸಲ್ಲಿಕೆ ಮಾಡಿದರೆ ಶೇ.100 ರಷ್ಟು ದಂಡ
> ಚರಾಸ್ತಿಗಳನ್ನ ಬಹಿರಂಗ ಪಡಿಸದಿದ್ದರೆ ದಂಡ
> ಎಲ್ಲಾ ರೀತಿಯ ಷೇರುದಾರರಿಗೆ ಮರುಖರೀದಿ (ಬೈಬ್ಯಾಕ್) ಬಂಡವಾಳ ಲಾಭಗಳ ಮೇಲೆ ತೆರಿಗೆ
> ಐಟಿಆರ್ ಫೈಲ್ ಅವಧಿ ಡಿಸೆಂಬರ್ 31ರಿಂದ ಮಾರ್ಚ್ 31 ರ ವರೆಗೆ ವಿಸ್ತರಣೆ
> ಐಟಿಆರ್-1 & ಐಟಿಆರ್-2 ಫಾರ್ಮ್ಗಳನ್ನು ಹೊಂದಿರುವವರು ಜುಲೈ 31 ರ ವರೆಗೆ ಅವಕಾಶ
> ಮರು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ ಬಳಿಕವೂ ರಿಟರ್ನ್ಸ್ ನವೀಕರಿಸಬಹುದು
ಯಾರಿಗೆ ತೆರಿಗೆ ಇಳಿಕೆ ಖುಷಿ
ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಇಳಿಕೆ
> ವಿದೇಶದಲ್ಲಿನ ಸಂಪತ್ತು ಘೋಷಣೆಗೆ 6 ತಿಂಗಳ ಅವಕಾಶ
> ವಿದೇಶದಲ್ಲಿನ ಸಂಪತ್ತು ಘೋಷಿಸಿದ್ರೆ ವಿಚಾರಣೆಯಿಂದ ವಿನಾಯ್ತಿ
> ಮನೆ, ಬ್ಯಾಂಕ್, ಅಕೌಂಟ್, ಪ್ರಾಪರ್ಟಿ, ಶೇರು ಬಗ್ಗೆ ಲೆಕ್ಕ ಕೊಡೋಕೆ ಅನ್ವಯ
> ವಿದೇಶದಲ್ಲಿನ ಹೂಡಿಕೆ ಒಂದು ಕೋಟಿ ಒಳಗಿದ್ರೆ 30% ರಷ್ಟು ದಂಡ (ಒಂದು ಕೋಟಿ ಮೀರಿದ್ರೆ ಎಷ್ಟು ಅಂತ ಪ್ರಸ್ತಾಪವಿಲ್ಲ)
> ಅಪಘಾತ ಕ್ಲೇಮ್ಗೆ ತೆರಿಗೆ ವಿನಾಯ್ತಿ
> ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರ 5% ರಿಂದ 2% ಕ್ಕೆ ಇಳಿಕೆ
> ವಿದೇಶಿ ಕಂಪನಿಗಳಿಗೆ 2047 ರ ವರೆಗೆ ತೆರಿಗೆ ರಜೆ
( ಭಾರತದಲ್ಲಿ ಡೇಟಾ ಕೇಂದ್ರ ಸ್ಥಾಪಿಸುವ ಮೂಲಕ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047 ರ ವರೆಗೆ ತೆರಿಗೆ ರಜೆ. ಭಾರತದಿಂದ ಡೇಟಾ ಸೇವೆಗಳನ್ನ ಸಹ-ಒದಗಿಸುವ ಸಂಸ್ಥೆಯು ಸಂಬಂಧಿತ ಘಟಕವಾಗಿದ್ದರೆ, ವೆಚ್ಚದಲ್ಲಿ 15% ಸುರಕ್ಷಿತ ಆಶ್ರಯವನ್ನು ಒದಗಿಸಲು ಸರ್ಕಾರ ಪ್ರಸ್ತಾಪಿಸಿದೆ)

25 ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲೆ ಎತ್ತಿದ್ದೇವೆ
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲೆ ಎತ್ತಿದ್ದೇವೆ ಅಂದಿರುವ ನಿರ್ಮಲಾ ಸೀತಾರಾಮನ್, ದೇಶದ ಜನ ಒಂದಷ್ಟು ಖುಷಿ ಪಡುವ ಹಾಗೂ ನಿರಾಳ ಎನ್ನಿಸುವಂಥ ಒಂದಷ್ಟು ಕ್ರಮಗಳನ್ನು ಘೋಷಿಸಿದ್ದಾರೆ. ಆದ್ರೆ ಐಷಾರಾಮಿ ಜೀವನ ನಡೆಸೋವ್ರಿಗೆ, ಚಟಗಳನ್ನು ಬೆಳೆಸಿಕೊಂಡವರಿಗೆ ಶಾಕ್ ಕೊಟ್ಟಿದ್ದಾರೆ. ಕೆಲವು ಫಾರಿನ್ ಬ್ರ್ಯಾಂಡ್ಗಳ ಜೊತೆಗೆ ಪಾಪಸುಂಕಾಸ್ತ್ರ ಬಳಸಿದ್ದಾರೆ. ಆದರೆ, ರೈತರ ಜೀವನ ಸುಧಾರಿಸ್ತೇವೆ ಅಂತ ಒಂದ್ಕಡೆ ಹೇಳ್ಕೊಂಡ್ರೂ ರಸಗೊಬ್ಬರ ಬೆಲೆ ಹೆಚ್ಚಾಗುವಂತೆ ಮಾಡಿದ್ದಾರೆ.
ಬಜೆಟ್ನಲ್ಲಿ ಯಾವುದೆಲ್ಲಾ ಏರಿಕೆ ಆಗಿದೆ..?
* ಐಷಾರಾಮಿ ವಾಚ್ಗಳು
* ಮದ್ಯ
* ತಂಬಾಕು, ಪಾನ್ ಮಸಾಲ, ಗುಟ್ಕಾ (ಸಿನ್ಟ್ಯಾಕ್ಸ್)
* ರಸಗೊಬ್ಬರಗಳು (ಅಮೋನಿಯಂ ಫಾಸ್ಫೇಟ್/ಅಮೋನಿಯಂ ನೈಟ್ರೋ ಫಾಸ್ಫೇಟ್ ಮೇಲಿನ ವಿನಾಯ್ತಿ ತೆಗೆಯಲಾಗಿದೆ)
* ಕಾಫಿ ಯಂತ್ರ ( ಹುರಿಯುವ, ಕುದಿಸುವ, ಮಾರಾಟ ಯಂತ್ರಗಳು)
* ಆಮದಿತ ಟಿವಿ ಉಪಕರಣಗಳು
* ಕ್ಯಾಮೆರಾ & ಫಿಲ್ಮಿಂಗ್ ದುಬಾರಿ
(ಆದರೆ, ಆಮದಿತ ಫೋಟೋಗ್ರಾಫಿಕ್, ಫಿಲ್ಮಿಂಗ್ & ಸೌಂಡ್ ರೆಕಾರ್ಡಿಂಗ್ ಉಪಕರಣಗಳ ಬೆಲೆ ಕಡಿಮೆ)

ಬಜೆಟ್ ಹೈಲೈಟ್ಸ್…!
* ವಿಬಿ ಜೀರಾಮ್ಜೀ ಯೋಜನೆಗೆ ಹಿಂದಿಗಿಂತಲೂ ಹೆಚ್ಚು ಹಣ – (ಈ ಹಿಂದೆ 88 ಸಾವಿರ ಕೋಟಿ; ಈಗ 95,692 ಕೋಟಿ ಮೀಸಲು)
* ನರೇಗಾದಿಂದ ಕೈಬಿಟ್ಟಿದ್ದ ಮಹಾತ್ಮಗಾಂಧಿ ಹೆಸರಲ್ಲಿ ಹೊಸ ಯೋಜನೆ (ಖಾದಿ, ಕೈಮಗ್ಗ ಬಲಪಡಿಸಲು ಮಹಾತ್ಮಗಾಂಧಿ ಗ್ರಾಮ ಸ್ವರಾಜ್ ಯೋಜನೆ)
* ದೇಶದ ಪ್ರತಿಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ
* `ಬಯೋಫಾರ್ಮಾ ಶಕ್ತಿ’ ಘೋಷಣೆ (ಮುಂದಿನ 5 ವರ್ಷಕ್ಕೆ 10,000 ಕೋಟಿ)
* ಮೂರು ಫಾರ್ಮಾ ಇನ್ಸ್ಟಿಟ್ಯೂಟ್ ಗಳ ನಿರ್ಮಾಣ
* ನಿಗದಿತ ಅವಧಿಯಲ್ಲಿ ಕ್ಲಿನಿಕಲ್ ಟೆಸ್ಟ್ಗಳು
* ಸೆಮಿ ಕಂಡಕ್ಟರ್ ಮಿಷನ್ಗೆ 40,000 ಕೋಟಿ
* ಅಪರೂಪದ ಖನಿಜಗಳಿಗೆ ಮೈನಿಂಗ್ ಕಾರಿಡಾರ್ ಘೊಷಣೆ
* ಮಹಿಳಾ ಉದ್ಯಮಶೀಲತೆಯನ್ನ ಬೆಂಬಲಿಸಲು ಸ್ವ-ಸಹಾಯ ಉದ್ಯಮಿಗಳ ಮಾರ್ಟ್ಗಳು
(ವ್ಯಾಪಾರ ಕೇಂದ್ರ.. ಉದಾ-ಡಿಮಾರ್ಟ್, ವಿಶಾಲ್ ಮಾರ್ಟ್)
* ಖೇಲೋ ಇಂಡಿಯಾ ಮಿಷನ್ ಆರಂಭ (ವಿಶ್ವಕ್ರೀಡೆಯಲ್ಲಿ ಸ್ಪರ್ಧೆಗಾಗಿ ಆರಂಭ. ಉದ್ಯೋಗ, ಉದ್ಯೋಗ ಅವಕಾಶ, ಕೌಶಲ್ಯಾಭಿವೃದ್ಧಿ ಸೃಷ್ಟಿ)
* ಜಾರ್ಖಂಡ್ನ ರಾಂಚಿ ಮತ್ತು ಅಸ್ಸಾಂನ ತೇಜ್ಪುರದಲ್ಲಿ ನಿಮ್ಹಾನ್ಸ್ ಸೆಂಟರ್
* ಗುಜರಾತ್ನ ಜಾಮ್ ನಗರದಲ್ಲಿ WHO ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರ (ಸಂಶೋಧನೆ, ಅಧ್ಯಯನ, ತಂತ್ರಜ್ಞಾನ ಕೇಂದ್ರ)
* 3 ಆಲ್ ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಆಯುರ್ವೇದ (ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನು ರಫ್ತು ಮಾಡುವುದರಿಂದ ಗಿಡಮೂಲಿಕೆಗಳನ್ನು ಬೆಳೆಯುವ ರೈತರಿಗೆ ಸಹಾಯವಾಗುತ್ತದೆ. ಆಯುಷ್ ಫಾರ್ಮಸಿಗಳ ಮೇಲ್ದರ್ಜೆ. ಅಂದಹಾಗೆ, ಈ ವರ್ಷ ಯಾವುದೇ ಹೊಸ ಐಐಎಂ, ಐಐಟಿಗಳ ಘೋಷಣೆ ಮಾಡಿಲ್ಲ)
* ದೇಶಾದ್ಯಂತ 15 ಪುರಾತತ್ವ ಸ್ಥಳಗಳ ಅಭಿವೃದ್ಧಿ
* ವಿಕಸಿತ ಭಾರತ್ಗಾಗಿ ಬ್ಯಾಂಕಿಂಗ್ ಕುರಿತು ಉನ್ನತ ಮಟ್ಟದ ಸಮಿತಿ
* ಸ್ವಾವಲಂಬಿ ಭಾರತ ನಿಧಿಗಾಗಿ 2,000 ಕೋಟಿ ಟಾಪ್ ಅಪ್

