ಹುಬ್ಬಳ್ಳಿ: ನಾಳೆ ಬರುವ ವಿಧಾನ ಪರಿಷತ್ ಫಲಿತಾಂಶದಲ್ಲಿ ಬಿಜೆಪಿಯು ಕನಿಷ್ಠ 15 ಸೀಟ್ಗಳನ್ನು ಗೆಲ್ಲುತ್ತದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನಮಗೆ ಆಶೀರ್ವಾದ ಮಾಡ್ತಾರೆ ಎನ್ನುವ ವಿಶ್ವಾಸವಿದೆ. ಇದರಿಂದ ವಿಧಾನ ಪರಿಷತ್ನಲ್ಲಿ ನಮಗೆ ಬಹುಮತ ಸಾಬೀತು ಆಗುತ್ತದೆ ಎಂದರು.
ಬೆಳಗಾವಿ ಅಧಿವೇಶನದ ಕುರಿತು ಮಾತನಾಡಿದ ಅವರು, ಅಧಿವೇಶನದಲ್ಲಿ ಅನೇಕ ವಿಷಯಗಳು ಚರ್ಚೆ ಆಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಮತಾಂತರ ಕಾಯ್ದೆ ನಿಷೇಧ ಜಾರಿ ವಿಚಾರವಾಗಿ ಕಾಂಗ್ರೆಸ್ ವಿರೋಧ ಇದ್ದೇ ಇರುತ್ತದೆ. ನಮ್ಮ ಅಪೇಕ್ಷೆಯೂ ನಿಷೇಧ ಮಾಡುವುದಾಗಿದೆ. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೇ ಅಲ್ಲ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆಡಳಿತ ಪಕ್ಷದವರು ಸೇರಿದಂತೆ ಸಂಸತ್ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಮತಾಂತರ ಕಾಯ್ದೆ ಜಾರಿಯಲ್ಲಿದೆ. ಅಧಿವೇಶನ ಮುಗಿಯುವ ಕೆಲ ಎರಡು ಮೂರು ದಿನಗಳ ಒಳಗೆ ಕಾಯ್ದೆ ಜಾರಿ ಆಗಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್
ಬಸವರಾಜ ಬೊಮ್ಮಾಯಿಗೆ ಬಿಜೆಪಿ ನಾಯಕರಿಂದ ಸಹಕಾರ ಸಿಗುತ್ತಿಲ್ಲ ಎನ್ನುವ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದರಲ್ಲಿ ಸತ್ಯಾಂಶ ಇಲ್ಲ. ಸಿಎಂ ಬೊಮ್ಮಾಯಿಗೆ ಎಲ್ಲಾ ರೀತಿಯ ಸಹಕಾರ ಸಿಗುತ್ತಿದೆ. ಬಿಜೆಪಿಯಲ್ಲಿ ಅವರ ಅವಧಿಯನ್ನು ಬೊಮ್ಮಾಯಿ ಪೂರ್ಣಗೊಳಿಸುತ್ತಾರೆ ಎಂದು ಬಿಎಸ್ವೈ ತಿಳಿಸಿದರು. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ