– ಸಿಪಿಐಎಂನಿಂದ ಕಣಕ್ಕಿಳಿದ ವರಲಕ್ಷ್ಮೀ
ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದಿಂದ ಸಿಪಿಐಎಂ ಅರ್ಭರ್ಥಿಯಾಗಿ ಸಿಐಟಿಯು ಸಂಘಟನೆಗಳ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ರವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಚುನಾವಣಾಧಿಕಾರಿಗಳಲ್ಲಿ ನಾಮಪತ್ರ ಸಲ್ಲಿಸಿ ತದನಂತರ ಮಾತನಾಡಿದ ವರಲಕ್ಷೀ ಅವರು, ಸಿಪಿಐಎಂ ಪಕ್ಷ ಅಂದ್ರೆ ಹೋರಾಟದ ಸಂಕೇತ, ಹೀಗಾಗಿ ಜನರಿಗೆ ಹೋರಾಟಗಾರರ ಮೇಲೆ ನಂಬಿಕೆಯಿದ್ದು ತಮಗೆ ಮತ ನೀಡಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಆಭ್ಯರ್ಥಿಯಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ದ್ವಾರಕಾನಾಥ್ ನಗರದ ಕರ್ತವ್ಯ ನಿರತ ಯೋಧ ನಾಗಾರ್ಜುನ್ ನಿವಾಸಕ್ಕೆ ಪತ್ನಿ ಸಮೇತ ಭೇಟಿ ನೀಡಿದರು. ಯೋಧನ ಪತ್ನಿ ಮೀನಾಕ್ಷಿ ಅವರಿಗೆ ಅರಿಶಿನ-ಕುಂಕುಮ ಇಟ್ಟು, ಬಾಗಿನ ಕೊಟ್ಟು ಗಮನ ಸೆಳೆದರು.
ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಡಳಿತ ಭವನದವರೆಗೂ ಬಿಎಸ್ಪಿ ಪಕ್ಷದ ಚಿಹ್ನೆ ಆನೆ ಪ್ರತಿಮೆ ಮುಖಾಂತರ ಮೆರವಣಿಗೆ ನಡೆಸಿದ ದ್ವಾರಕನಾಥ್, ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸಿಎಸ್ ದ್ವಾರಕಾನಾಥ್, ದೇಶದಲ್ಲಿ ಯೋಧರನ್ನ ರಾಜಕೀಯವಾಗಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಯೋಧರ ಪರ ದನಿಯಾಗಿ ಸಂಸತ್ ನಲ್ಲಿ ಧ್ವನಿ ಎತ್ತುವ ಸಲುವಾಗಿ ಸೇರಿದಂತೆ ಕ್ಷೇತ್ರದಲ್ಲಿನ ಗಂಭೀರ ಸಮಸ್ಯೆಯಾದ ನೀರಾವರಿ ಪರ ಮಾತನಾಡಲು ನಾನು ಈ ಬಾರಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.