ಪಕ್ಷಕ್ಕೆ ದ್ರೋಹ ಮಾಡಿದ ಶೆಟ್ಟರ್‌ನ್ನು ಯಾರು ಕ್ಷಮಿಸಲ್ಲ : ಬಿಎಸ್‍ವೈ ವಾಗ್ದಾಳಿ

Public TV
3 Min Read
bs yediyurappa

– ರಾಜ್ಯಸಭೆಗೆ ಆಯ್ಕೆ ಮಾಡಿ ಮಂತ್ರಿ ಸ್ಥಾನದ ಆಫರ್ ನೀಡಲಾಗಿತ್ತು
– ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಸಿಎಂ ಎಲ್ಲವನ್ನೂ ನೀಡಲಾಗಿತ್ತು

ಬೆಂಗಳೂರು: ಬಿಜೆಪಿ (BJP) ಪಕ್ಷಕ್ಕೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಯಾರು ಕ್ಷಮಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ವಾಗ್ದಾಳಿ ನಡೆಸಿದರು.

ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಮಧ್ಯಾಹ್ನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೆಟ್ಟರ್ ಜನಸಂಘದಿಂದಲೂ ಬಿಜೆಪಿ ಜತೆಗಿದ್ದರು. ಶೆಟ್ಟರ್ ಅವರನ್ನು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ, ಮಂತ್ರಿ, ಸಿಎಂ ಮಾಡಿದ್ವಿ. ಬಿ.ಬಿ ಶಿವಪ್ಪರನ್ನು ಎದುರು ಹಾಕಿಕೊಂಡು ಶೆಟ್ಟರ್ ಅವರನ್ನು ವಿಪಕ್ಷ ನಾಯಕ ಮಾಡಿದ್ದೆವು. ನಾನು, ಅನಂತ ಕುಮಾರ್ ಅವರಿಗೆ ಕಾವಲು ಇದ್ದೆವು. ನಮ್ಮ ಜತೆ ಹೆಜ್ಜೆ ಹಾಕುವುದು ಅವರ ಜವಾಬ್ದಾರಿ ಆಗಿತ್ತು. ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ ಹಾಗೂ ಅವರ ನಿರ್ಧಾರ ಅವರು ನಂಬಿದ ವಿಚಾರಕ್ಕೆ ತದ್ವಿರುದ್ಧ ಇದೆ ಎಂದರು.

Jagadish Shettar Hubli National Flag Congress Narendra Modi

ಅವರು ಕೇಳಿದ್ದನ್ನು ಎಲ್ಲವೂ ಪಕ್ಷ ನೀಡಿದೆ. ಸ್ಥಾನಮಾನ ಸಿಗಲಿ, ಸಿಗದಿರಲಿ, ದೇಶಕ್ಕಾಗಿ ಕೆಲಸ ಮಾಡಬೇಕಿರುವುದು ನಾವು ನಡೆದುಕೊಂಡು ಬಂದ ದಾರಿಯಾಗಿದೆ. ಪಕ್ಷದ ಸಹಕಾರ ಇಲ್ಲದಿದ್ದರೆ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ. ಆದರೂ ಶೆಟ್ಟರ್ ಹಠ ಮಾಡಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಹೋಗಿರೋದು ಅಕ್ಷಮ್ಯ ಅಪರಾಧವಾಗಿದೆ. ಶೆಟ್ಟರ್‌ಗೆ ನಾವೇನೂ ಕಮ್ಮಿ ಮಾಡಿರಲಿಲ್ಲ. ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇದನ್ನು ಯಾರೂ ಕ್ಷಮಿಸಲ್ಲ ಎಂದು ಕಿಡಿಕಾರಿದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಹಳೇಬೇರು ಹೊಸ ಚಿಗುರು ಸೇರಿ ಈ ಪಕ್ಷ ಬೆಳೆಸಬೇಕಾಗಿದೆ. ಪಕ್ಷದ ಹೈಕಮಾಂಡ್ ನಿಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಹೇಳಿತ್ತು. ಆದರೂ ಶೆಟ್ಟರ್ ಎಲ್ಲವನ್ನೂ ಧಿಕ್ಕರಿಸಿ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಿದ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

bjp flag

ಬಿಜೆಪಿ ನನಗೆ, ಶೆಟ್ಟರ್‌ಗೆ, ಸವದಿಗೆ, ಈಶ್ವರಪ್ಪಗೆ ಸಮಾನ ಸ್ಥಾನಮಾನ ಕೊಟ್ಟು, ಅನೇಕ ಅವಕಾಶ ಕೊಟ್ಟಿದೆ. ನನ್ನಂಥ ಸಾಮಾನ್ಯ ಕಾರ್ಯಕರ್ತ ರಾಜ್ಯದ ಉದ್ದಗಲಕ್ಕೂ ಜನರ ಪ್ರೀತಿ ಗಳಿಸಲು ಬಿಜೆಪಿ ಕಾರಣವಾಗಿದೆ. ಸವದಿಯವರು ಸೋತರೂ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಹುದ್ದೆ ನೀಡಲಾಗಿತ್ತು. ಸವದಿಯವರನ್ನು ಬಿಜೆಪಿಗೆ ಕರೆತಂದು ಶಾಸಕ, ಮಂತ್ರಿ, ಎಂಎಲ್ಸಿ, ಡಿಸಿಎಂ, ಕೋರ್ ಕಮಿಟಿ ಸದಸ್ಯರಾಗಿ ಮಾಡಿ ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ. ಅವರಿಗೆ ನಾವೇನು ಕಮ್ಮಿ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಮಾನ ರೆಡಿ – ರಾಹುಲ್ ಸಮ್ಮುಖದಲ್ಲಿಯೇ ಶೆಟ್ಟರ್ ‘ಕೈ’ ಸೇರ್ಪಡೆ?

ಸವದಿ (Laxman Savadi) ಇನ್ನೂ ಶಾಸಕರಾಗಿಯೂ ಮುಂದುವರಿಯಬಹುದಿತ್ತು. ಮತ್ತೆ ಅವರನ್ನು ಸಚಿವರಾಗಿ ಮಾಡಲು ಯಾವುದೇ ಅಡ್ಡಿ ಇರಲಿಲ್ಲ. ಸವದಿಗೆ ಮತ್ತೊಮ್ಮೆ ಸಚಿವ ಮಾಡೋದಕ್ಕೆ ಅಭ್ಯಂತರ ಇರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದು, ಜನತೆಗೆ ಮಾಡಿದ ದ್ರೋಹವಾಗಿದೆ. ಸವದಿ ಅವರೇ ನಿಮಗೆ ಏನು ಅನ್ಯಾಯ ಆಗಿತ್ತು? ನಿಮಗೆ ಏನು ಆತಂಕ ಇತ್ತು? ನೀವು ಮಾಡಿದ್ದು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ. ಜನ ಸವದಿಯವರನ್ನು ಕ್ಷಮಿಸಲ್ಲ ಎಂದು ಗುಡುಗಿದರು.

Agnipath Project PM Narendra Modi Laxman Savadi BJP 1

ನನಗೆ ಎಂಭತ್ತು ವರ್ಷ. ನಾನು ಸಂಪೂರ್ಣ ಬದುಕನ್ನು ಬಿಜೆಪಿ, ದೇಶಕ್ಕೆ ಮುಡಿಪಾಗಿಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಆಗಲ್ಲ. ಹೊಸಮುಖಗಳಿಗೆ ಅವಕಾಶ ಮಾಡಿದ್ದೇವೆ. ಎಲ್ಲ ಸಮುದಾಯ ಜೊತೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯಲ್ಲಿ ಹೊಸತನ, ಹೊಸ ಹುರುಪು ಬರುವಂತಾಗಲು ಹಿರಿಯರು ಅವಕಾಶ ಮಾಡಿಕೊಡಬೇಕು. ಎಲ್ಲ ಹುದ್ದೆಗಳನ್ನು ನೀಡಿದ ಬಿಜೆಪಿಗೆ ರಾಜೀನಾಮೆ ನೀಡಿರುವುದು ಅಕ್ಷ್ಯಮ್ಯ ಅಪರಾಧ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್

Share This Article