ಬೆಂಗಳೂರು: ಸದನದ ಆರಂಭದ ಮೊದಲ ದಿನವೇ ಸಿಎಂ ಅವರು ವಿಶ್ವಾಸ ಮತಯಾಚನೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಆದರೆ ಬಹುಮತ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತಯಾಚಿಸೋದ್ರದಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈಗಾಗಲೇ 10 ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು 5 ಶಾಸಕರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಇಷ್ಟಾದ್ರು ಸಿಎಂ ವಿಶ್ವಾಸ ಮತಯಾಚನೆ ಮಾಡಲು ಸ್ವಯಂ ಮುಂದೇ ಬಂದಿರುವ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದ್ದರಿಂದ ಬಹುಬೇಗ ಈ ನಿರ್ಧಾರ ಮಾಡಲಿ. ನ್ಯಾಯಾಲಯದ ತೀರ್ಪು ಬರುವವರೆಗೂ ಕಾದು ನೋಡುತ್ತೇವೆ ಎಂದರು.
ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಟ್ಟು ಹೋಗುವುದನ್ನ ತಡೆಯಲು ಸಿಎಂ ಮಾಡಿರುವ ವ್ಯವಸ್ಥಿತ ರಾಜಕೀಯ ಷಡ್ಯಂತರಷ್ಟೇ. ಆದರೆ ಈಗಾಗಲೇ ಶಾಸಕರು ಸುಪ್ರೀಂ ಕೋರ್ಟಿಗೆ ತೆರಳಿರುವುದಿಂದ ಮತ್ತೆ ವಾಪಸ್ ಬರುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇದು ಅವರಿಗೂ ಸ್ಪಷ್ಟವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಉಳಿಯವುದಿಲ್ಲ. ಸದ್ಯದ ವಾತಾವರಣ ನಮಗೆ ಅನುಕೂಲಕರವಾಗಿದೆ ಎಂದರು.
ಇತ್ತ ಬಿಎಸ್ ಯಡಿಯೂರಪ್ಪ ಬಿಜೆಪಿ ಶಾಸಕರೊಂದಿಗೆ ಸಭೆಗೆ ರೆಸಾರ್ಟಿಗೆ ತೆರಳಿದ್ದು, ಬುಧವಾರ ಬಹುಮತ ಸಾಬೀತಿಗೆ ಸಮಯ ಕೇಳಿರುವುದರಿಂದ ಶಾಸಕರ ಜೊತೆ ಸದ್ಯದ ಬೆಳವಣಿಗೆಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಇತ್ತ ಇದೇ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ ಅವರು, ರಿವರ್ಸ್ ಆಪರೇಷನ್ ಭಯದಿಂದ ಶಾಸಕರು ರೆಸಾರ್ಟಿಗೆ ತೆರಳಿಲ್ಲ. ಎಲ್ಲರೂ ಒಂದೆಡೆ ಸೇರಿ ತುಂಬಾ ಸಮಯ ಆಗಿತ್ತು. ಸದನದಲ್ಲಿ ವಿಶ್ವಾಸ ಮತ ಇರುವುದರಿಂದ ಈಗ ಎಲ್ಲರೂ ಇದ್ದೇವೆ ಅಷ್ಟೇ ಎಂದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಒನ್ ಮ್ಯಾನ್ ಆರ್ಮಿ ಆಗಿದ್ದಾರೆ. 2-3 ದಿನಗಳಿಂದ ಏಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಯಾವುದೇ ಮಾಹಿತಿ ಇಲ್ಲದೇ ನಾವು ಕೂಡ ಮಾತನಾಡಲ್ಲ. ಸಿಎಂ ಅವರು ಹಳಿ ತಪ್ಪಿ ತುಂಬಾ ದಿನವಾಗಿದೆ. ಮಂಗಳವಾರ ಅಥವಾ ಬುಧವಾರ ಎಲ್ಲಾ ರೀತಿಯ ತೀರ್ಮಾನವಾಗುತ್ತೆ ಬಿಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.