– ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್
– ಮಂತ್ರಿ ಸ್ಥಾನ ಕೈತಪ್ಪಿ ಉಮೇಶ್ ಕತ್ತಿ ಬೇಸರ
ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ನೀಡುವ ವಿಚಾರ ಸಿಎಂ ಯಡಿಯೂರಪ್ಪ ಅವರ ಸರ್ಕಾರಕ್ಕೆ ತಲೆ ನೋವಾಗಿದೆ. ಯಾವ ಸದನದ ಸದಸ್ಯರು ಅಲ್ಲದ ಯೋಗೇಶ್ವರ್ ಅವರಿಗೆ ಆಪರೇಷನ್ ಕಮಲದ ಯಶಸ್ಸಿಗೆ ದುಡಿದ್ದರು ಎಂಬ ಏಕೈಕ ಕಾರಣಕ್ಕಾಗಿ ಮಂತ್ರಿಗಿರಿ ದಯಪಾಲಿಸಲು ಸಿದ್ಧತೆ ನಡೆದಿತ್ತು. ಆದರೆ ಇದಕ್ಕೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದು ಮಾಜಿ ಸಚಿವ ಹೆಚ್.ವಿಶ್ವನಾಥ್ ಎನ್ನಲಾಗಿದೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್
ಹೆಚ್.ವಿಶ್ವನಾಥ್ ಅವರು ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ರವಾನಿಸಿದ್ದರು. ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಮೋಸ ಕಾರಣ. ಎಲೆಕ್ಷನ್ ಖರ್ಚಿಗೆ ಹಣ ಪಡೆದು ಅದನ್ನು ಹಂಚದೇ ಮೋಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬರಲು ನಮ್ಮ ತ್ಯಾಗ ದೊಡ್ಡದು. ಆದರೆ ನಮಗೆ ಯೋಗೇಶ್ವರ್ ಮೋಸ ಮಾಡಿಬಿಟ್ಟರು. ಇಂಥವರಿಗೆ ಮಂತ್ರಿ ಸ್ಥಾನ ನೀಡಿದ್ರೆ ಹೇಗೆ? ನಮಗೆ ಹೇಗೆ ಅನ್ನಿಸಬೇಕು ಹೇಳಿ ಎಂದು ಪತ್ರದಲ್ಲಿ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ನಾನು ಹೈಕಮಾಂಡ್ ಬುಕ್ ಮಾಡ್ಕೊಂಡಿದ್ದೇನೆ ಎಂದು ಆಪ್ತರ ಬಳಿ ಸಿ.ಪಿ.ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಇದು ಸತ್ಯನಾ ಎಂದು ವಿಶ್ವನಾಥ್ ಹೈಕಮಾಂಡ್ಗೆ ಪ್ರಶ್ನೆ ಮಾಡಿದ್ದರು. ಈ ಪತ್ರ ನೋಡಿದ ಕೂಡಲೇ ಅಮಿತ್ ಶಾ, ಪಕ್ಷದ ಮೂಲ ನಿವಾಸಿಗಳ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಯೋಗೇಶ್ವರ್ ವಿಚಾರ ಮಿಂತ್ರಮಂಡಳಿಯಲ್ಲಿಯೂ ಬಿರುಕಿಗೆ ಕಾರಣವಾಗಿದೆ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಏಕೆ ಕೊಡ್ತೀರಿ ಎಂದು ವಿಶ್ವನಾಥ್ ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ. ಆದ್ರೆ, ಕುಮಟಳ್ಳಿ ಮಾತ್ರ, ಯೋಗೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್ ಆಗಿದ್ದಾರೆ. ಟ್ವೀಟ್ ಮೂಲಕ, ಹೇಳಿಕೆ ಮೂಲಕ ಯೋಗೇಶ್ವರ್ ವಿರುದ್ಧ ಕೆಂಡಕಾರಿದ್ದಾರೆ. ಇದು ಬಂಡಾಯ ಅಲ್ಲ ಎನ್ನುತ್ತಲೇ, ಸೋತವರಿಗೆ ಮಂತ್ರಿಗಿರಿ ನೀಡುತ್ತಾ ಹೋದ್ರೆ ಪಕ್ಷಕ್ಕೆ ಮುಜುಗರ ಆಗುತ್ತೆ ಎಂದಿದ್ದಾರೆ.
ಯೋಗೇಶ್ವರ್ ಬೆಂಬಲಕ್ಕೆ ನಿಂತ ಡಿಸಿಎಂ ಅಶ್ವಥ್ನಾರಾಯಣ್ ಅವರಿಗೂ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಯೋಗೇಶ್ವರ್ ಮೇಲೆ ಪ್ರೀತಿ ಇದ್ದವರು ತಮ್ಮ ಸ್ಥಾನವನ್ನೇ ಅವರಿಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ನಾಳೆಯ ಪದಗ್ರಹಣ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಉಮೇಶ್ ಕತ್ತಿ, ಹೈಕಮಾಂಡ್ ನಡೆಯಿಂದ ಬೇಸರಗೊಂಡಿದ್ದಾರೆ. ಇದೇ ಬೇಸರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೊಟ್ರೆ ಕೊಡ್ಲಿ ಬಿಟ್ರೆ ಬಿಡ್ಲಿ ಅಂತ ಹೇಳಿದರು. ಸಂಜೆ ಸಿಎಂ ಕರೆದು ಮಾತನಾಡಿದ್ದರು. ಆದರೆ ಕೋಪ ಕರಗಿರಲಿಲ್ಲ. ಸಚಿವ ಸ್ಥಾನ ಕೈತಪ್ಪಿದ ಬೇಸರದಲ್ಲಿರುವ ಸಿಪಿ ಯೋಗೇಶ್ವರ್ ಅವರನ್ನು ಸಿಎಂ ಪುತ್ರ ವಿಜಯೇಂದ್ರ ಸಮಾಧಾನ ಮಾಡುವ ಯತ್ನ ಮಾಡಿದ್ದರು. ಮಾಧ್ಯಮಗಳಲ್ಲಿ ಮಾತ್ರ 10+3 ಅಂತ ಬಂತು. ಈಗ ಕೇವಲ ಹತ್ತು ಜನರಿಗೆ ಅವಕಾಶ ಅಂತ ಬರುತ್ತಿದೆ. ನಾಳೆ ಬೆಳಗ್ಗೆ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಆದ್ರೆ ಪಕ್ಷದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮಾತ್ರ, ವಿಜಯೇಂದ್ರ ಅವರನ್ನು ಹಲವರು ಭೇಟಿ ಮಾಡಿದ ತಕ್ಷಣ, ಲಾಬಿ ಅಂತಾ ಅರ್ಥ ಅಲ್ಲ. ನಾಳೆಯವರೆಗೂ ಕುತೂಹಲ ಉಳಿಯಲಿ ಎಂದರು.