ಮುಂಬೈ: ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಲು ವಿಫಲವಾದಲ್ಲಿ ಅಧಿಕಾರದಿಂದ ಕೆಳಗಿಳಿಸುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಗುಡುಗಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಅವರು ಆರ್ಎಸ್ಎಸ್ ಎದುರು ಈ ಬೇಡಿಕೆ ಇಟ್ಟಿದ್ದು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಒಂದೇ ಸಿದ್ಧಾಂತ ಹೊಂದಿರುವ ಪಕ್ಷವಾಗಿ ಬಿಜೆಪಿ ರಾಮ ಮಂದಿರ ನಿರ್ಮಾಣ ಮಾಡಲೇ ಬೇಕಿದೆ. ಇಲ್ಲವಾದಲ್ಲಿ ಸರ್ಕಾರ ಅಧಿಕಾರದಲ್ಲಿ ಇರಲು ಬೇರೆ ಕಾರಣವೇ ಉಳಿದಿಲ್ಲ ಎಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿರುವ ಆರ್ಎಸ್ಎಸ್ ತಾಕೀತು ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ರಾಮ ಮಂದಿರ ನಿರ್ಮಾಣದ ಕುರಿತು ನೆನಪು ಮಾಡಲು ಠಾಕ್ರೆ ಅವರು ನ.25 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಶಿವಸೇನಾ ಪಕ್ಷ ಮಾತ್ರವೇ ಈ ಕುರಿತು ಎಚ್ಚರಿಕೆ ನೀಡಲಿದೆ. ಕೋರ್ಟ್ ಮೂಲಕ ಈ ವಿವಾದವನ್ನು ಬಗೆಹರಿಸಲು ಚಿಂತಿಸಿದರೆ 1 ಸಾವಿರ ವರ್ಷ ತೆಗೆದುಕೊಳ್ಳುತ್ತದೆ ಎಂದು ಶಿವಸೇನಾ ಮುಖಂಡ, ಸಂಸದ ಸಂಜಾಯ್ ರವೌತ್ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಸಮಯದಿಂದಲೂ ಶಿವಸೇನಾ ಪದೇ ಪದೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದೆ. ಆದರೆ ಇತ್ತ ಬಿಜೆಪಿ ಮಾತ್ರ ಮತ್ತೆ ಶಿವಸೇನಾ ಪಕ್ಷದೊಂದಿಗೆ ಮೈತ್ರಿ ನಡೆಸುವ ಕುರಿತು ಮಾತನಾಡಿದೆ. ಬಿಜೆಪಿ ಮಾತಿಗೆ ತಿರುಗೇಟು ನೀಡಿರುವ ಶಿವಸೇನೆ ತನ್ನ ಮುಖವಾಣಿ `ಸಾಮ್ನಾ’ ಪತ್ರಿಕೆಯಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ಅಲ್ಲದೇ ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸವಾಲು ನೀಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv