ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣಾ ಟಿಕೆಟ್ ಸಿಕ್ಕಿಲ್ಲ. ಮುಂದಿನ ಬಾರಿ ಗ್ರಾಮ ಪಂಚಾಯತ್ಗೆ ಪ್ರಯತ್ನಿಸುತ್ತೇನೆ ಎಂದು ಪ್ರದೇಶ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಬ್ರಿಜೇಶ್ ಕಾಳಪ್ಪ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಪ್ರಕಟಿಸಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
2009,2014 ರ ಲೋಕಸಭೆಯ ಟಿಕೆಟ್, 2014,16,18 ರ ವಿಧಾನಸಭಾ ಚುನಾವಣಾ ಟಿಕೆಟ್ ಕೈ ತಪ್ಪಿದೆ.
2016ರಲ್ಲಿ ಪಕ್ಷ ಸೇರಿದ ವ್ಯಕ್ತಿ ಅದೇ ವರ್ಷ ವಿಧಾನ ಪರಿಷತ್ ಟಿಕೆಟ್ ಪಡೆಯುವುದರಲ್ಲಿ ಸಫಲರಾಗಿದ್ದರು. ಅದೇ ವ್ಯಕ್ತಿ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನನಗೆ ಆದ ಅವಮಾನವನ್ನು ಸಹಿಸಿಕೊಳ್ಳುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಇಷ್ಟೆಲ್ಲ ಅವಕಾಶಗಳನ್ನು ಕೊಡುವುದಾದಲ್ಲಿ ಜಯಪ್ರಕಾಶ್ ಹೆಗಡೆ ಅಂತಹ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರಗೆ ಹೋಗಲು ಏಕೆ ಬಿಟ್ಟಿತು ಅನ್ನುವ ಪ್ರಶ್ನೆ ಏಳುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಜಯಪ್ರಕಾಶ್ ಹೆಗಡೆಯವರು ವಿಧಾನ ಪರಿಷತ್ನ ಟಿಕೆಟ್ ಆಕಾಂಕ್ಷಿಯಾಗಿದ್ದರು.
ನನಗೆ ಯೋಗ್ಯವಾದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳುವಂತೆ ಪಕ್ಷದ ಸದಸ್ಯರೊಬ್ಬರು ಹೇಳಿದರು. ನನಗಾದ ನಿರಾಶೆಗೆ ಪ್ರೀತಿಯ, ಗೌರವದ ಫೇಸ್ ಬುಕ್ ಸ್ನೇಹಿತರೆ ಕಣ್ಣೀರು ಹಾಕಬೇಡಿ ಎಂದು ಹೇಳಿದ್ದಾರೆ. ರಾಜೇಶ್ ಖನ್ನಾ ಅವರ “ಪುಷ್ಪ, ಕಣ್ಣೀರನ್ನು ನಾನು ದ್ವೇಷಿಸುತ್ತೇನೆ” ಎನ್ನುವ ಸಾಲುಗಳನ್ನು ನೆನಪಿಸುತ್ತೇನೆ ಎಂದಿದ್ದಾರೆ.
ಇತರೆ ಪಕ್ಷಗಳಿಂದ ಕರೆಗಳು ಬಂದಿದೆ. ಕರೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಯಾರು ಎಂದು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ತಿಳಿಸಿಕೊಟ್ಟಿದೆ. ಕರ್ನಾಟಕ ಸಚಿವ ಸ್ಥಾನಮಾನವನ್ನು ಕೊಟ್ಟಿದೆ. ನನ್ನ ಕೆಲಸಕ್ಕೆ ಹೋಲಿಸದರೆ ಪಕ್ಷ ಹೆಚ್ಚೇ ಕೊಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮುಂಖಂಡರಿಗೆ ಸದಾ ಅಭಾರಿಯಾಗಿದ್ದೇನೆ ಎಂದು ಬರದುಕೊಂಡಿದ್ದಾರೆ.