– ವಾಮಂಜೂರಿನಲ್ಲಿ ಕೆಲಕಾಲ ಕೈ ಕೊಟ್ಟ ಇವಿಎಂ
– ವೃದ್ಧನಿಗೆ ಕಾಂಗ್ರೆಸ್ ಅಭ್ಯರ್ಥಿ ಸಹಾಯ
ಮಂಗಳೂರು: ಸದೃಢ ಭಾರತಕ್ಕಾಗಿ ನವವಧುಗಳು ಸರತಿ ಸಾಲಿನಲ್ಲಿಯೇ ನಿಂತು ತನ್ನ ಹಕ್ಕು ಚಲಾಯಿಸಿರುವ ಘಟನೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ಶ್ರುತಿ ಶೆಟ್ಟಿ ಎಂಬವರೇ ಈ ರೀತಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.
ಕೈಕೊಟ್ಟ ಇವಿಎಂ:
ಮಂಗಳೂರಿನಲ್ಲಿ ಇವಿಎಂ ಮೆಷಿನ್ ಕೆಲಕಾಲ ಕೈಕೊಟ್ಟಿತ್ತು. ವಾಮಂಜೂರು ತಿರುವೈಲ್ ವಾರ್ಡ್ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದೆ. ಕೈಕೊಟ್ಟ ಇವಿಎಂನಿಂದಾಗಿ ಮತದಾರರು ಅಸಮಾಧಾನಗೊಂಡು ವಾಪಾಸ್ ಆಗಿದ್ದರು. ಹೀಗಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ವಾಪಸ್ಸಾದವರು ಸೇರಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ವೃದ್ಧನಿಗೆ ಮಿಥುನ್ ರೈ ಸಹಾಯ:
ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್ಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸಹಾಯ ಮಾಡಿದ್ದಾರೆ. ಕಾರಿನಿಂದ ಎತ್ತಿ ಇಳಿಸಿ ನಂತರವ್ಹೀಲ್ ಚೇರ್ ನಲ್ಲಿ ರೈ ಕೂರಿಸಿದ್ದಾರೆ. ಮಿಥುನ್ ರೈ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಿಥುನ್, ಹೆಗಲಿಗೆ ಕೇಸರಿ ಮತ್ತು ಹಳದಿ ಶಾಲು ಹಾಕ್ಕೊಂಡು ಬಂದಿದ್ದರು.
ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕೂಡ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ರು. ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು.