-ಪುಷ್ಪವೃಷ್ಟಿ ಹಾಕಿ ಹಿರಿಯರಿಂದ ಆಶೀರ್ವಾದ
ವಿಜಯಪುರ: ವರ ವಧುವಿಗೆ ತಾಳಿಕಟ್ಟೋದು ಕಾಮನ್. ಆದ್ರೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ.
ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಇದೊಂದು ವಿಶಿಷ್ಠ ಮದುವೆ ಆಚರಣೆಯಾಗಿದೆ. ಸೋಮವಾರದಂದು ನಾಲತವಾಡ ಪಟ್ಟಣದಲ್ಲಿ ಎರಡು ಜೋಡಿಗಳು ವಿಶೇಷವಾಗಿ ಮದುವೆಯಾಗಿದ್ದಾರೆ. ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮಿತ್ ಜೊತೆ ಪ್ರಿಯಾ ಎನ್ನುವ ಎರಡು ಜೊಡಿಯ ಮದುವೆ ಆಗಿದ್ದು, ಇಲ್ಲಿ ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಶೇಷವಾಗಿತ್ತು.
ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದ ಮದುವೆ ಇದಾಗಿದ್ದು, ಶುಭ ಮುಹೂರ್ತ ನೋಡದೆ ಮದುವೆ ಮಾಡಿಸಲಾಗಿದೆ. ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಹಿರಿಯರು ಆಶೀರ್ವಾದ ಮಾಡಿದ್ದಾರೆ.
ಈ ಮದುವೆಯಲ್ಲಿ ಇನ್ನೊಂದು ವಿಶೇಷವೇನೆಂದರೆ, ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನಸುಧೆ, ವಚನವರ್ಷ ಪುಸ್ತಕಗಳ ವಿತರಣೆ ಮಾಡಲಾಯಿತು. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು, ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv