ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.
ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.
ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.