ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೀವು ಬೇಗ ಬರಬಹುದಿತ್ತಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನೇನು ದೇವರಾ, ನಾ ಬೇಗ ಬಂದು ಏನ್ ಮಾಡ್ಬೇಕು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕೊಳವೆಗೆ ಕಾವೇರಿ ಎಂಬ ಬಾಲಕಿ ಬಿದ್ದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ವಿಳಂಬವಾಗಿ ಸ್ಥಳಕ್ಕೆ ಆಗಮಿಸಿದ್ದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಸ್ವಲ್ಪ ಬೇಗ ಬರಬಹುದಿತ್ತಲವೇ ಎಂದು ಪ್ರಶ್ನೆ ಕೇಳಿದ್ದಕ್ಕೆ, ನಾನೇನು ದೇವರಾ.. ಬೇಗ ಬಂದು ನಾನ್ ಏನ್ ಮಾಡ್ಬೇಕು? ಎಷ್ಟು ಕೋಟಿ ಹಣ ವ್ಯಯ ಮಾಡಿದ್ರೂ ಬಾಲಕಿ ಬದುಕಿ ಬರಲ್ಲಾ. ಬದುಕಿ ಬಂದರೆ ಸಂತೋಷ ಎಂದು ಉತ್ತರಿಸಿದ್ದಾರೆ.
ನನಗೆ ನಮ್ಮ ಜಿಲ್ಲಾಡಳಿತದ ಅಧಿಕಾರಿಗಳ ಮೇಲೆ ನಂಬಿಕೆಯಿದೆ. ಅವರು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ನಾನು ದೂರದಿಂದಲೇ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಉಡಾಫೆಯ ಮಂತ್ರಿಗಳು: ಈ ಸರ್ಕಾರದಲ್ಲಿ ಎಲ್ಲಾ ಉಡಾಫೆ ಮಂತ್ರಿಗಳೇ ಇರೋದು. ಸಿಎಂ ಕೂಡಾ ಉಡಾಫೆ ವರ್ತನೆ ತೋರಿಸ್ತಾರೆ. ಮುಖ್ಯಮಂತ್ರಿಗಳ ಹಾಗೆ ಮಂತ್ರಿಗಳು ಅನುಸರಿಸುತ್ತಾರೆ. ಸಿಎಂ ಎಸ್ಪಿ ಗೆ ಸಾರ್ವಜನಿಕವಾಗಿ ಬೈಯ್ತಾರೆ. ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆಯಿಲ್ಲ. ಚುನಾವಣೆ ನಂತರ ಕಾಂಗ್ರೆಸ್ನ ಅಡ್ರೆಸ್ ಇರೋದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.
ಕೊಳವೆಬಾವಿ ದುರಂತ ಪ್ರಕರಣಗಳು ನಡೆಯುತ್ತಾನೆ ಇರುತ್ತದೆ. ದುರ್ಘಟನೆ ನಡೆದಿದೆ ಆ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ಸರ್ಕಾರದಲ್ಲಿ ಈಗಾಗಲೇ ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ಆದೇಶಗಳಿವೆ. ಜಮೀನಿನಲ್ಲಿ ತೆರೆದ ಕೊಳವೆ ಬಾವಿ ಮುಚ್ಚಲು ಆದೇಶವಿದೆ. ಇದನ್ನು ಬಿಟ್ಟು ಮಾಧ್ಯಮಗಳು ಬೇರೆ ವಿಚಾರಗಳನ್ನ ಹೈಲೈಟ್ ಮಾಡಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ.