ಮುಂಬೈ: ಹಾಸ್ಯದ ಮೂಲಕವಾಗಿ ಮೋಡಿ ಮಾಡುವ ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲಿದ್ದಾರೆ.
ಸದ್ಯ ಸ್ಯಾಂಡಲ್ವುಡ್ನಲ್ಲಿ ಪ್ರಜ್ವಲ್ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಚೆಗೆ ಅವರೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಗೋವಿಂದ್ ಒಂದು ಮಹತ್ವದ ಪಾತ್ರ ಮಾಡೋದು ಖಚಿತ ಎನ್ನಲಾಗುತ್ತಿದೆ. ಕಿರಣ್ ವಿಶ್ವನಾಥ್ ಎಂಬ ಹೊಸ ಪ್ರತಿಭೆ ಇದರ ನಿರ್ದೇಶಕರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿರಣ್, ನಾವು ಗೋವಿಂದ್ ಅವರೊಂದಿಗೆ ಮಾತುಕತೆ ಮಾಡುತ್ತಿರುವುದು ನಿಜ. ನಮ್ಮ ನಿರ್ಮಾಪಕ ನವೀನ್ ಕುಮಾರ್ ಅವರು ಈಗಾಗಲೇ ಹಲವು ಸುತ್ತಿನ ಚರ್ಚೆ ಮಾಡಿದ್ದಾರೆ. ಅಧಿಕೃತ ಒಪ್ಪಿಗೆ ಸಿಗುವುದು ಬಾಕಿ ಇದೆ. ಎಲ್ಲವೂ ಅಂತಿಮಗೊಂಡ ಮೇಲೆ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಡಾ. ರಾಜ್ಕುಮಾರ್ ಅವರಿಗೆ ಗೋವಿಂದ್ ದೊಡ್ಡ ಅಭಿಮಾನಿ ಎಂಬುದು ಗೊತ್ತಿರುವ ವಿಷಯ. ಒಮ್ಮೆ ರಿಯಾಲಿಟಿ ಶೋವೊಂದರಲ್ಲಿ ಡಾ. ರಾಜ್ ನಟಿಸಿದ್ದ ಎರಡು ಕನಸು ಸಿನಿಮಾದ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಹಾಡನ್ನು ಹಾಡಿದ್ದರು. ಅದು ಸಖತ್ ವೈರಲ್ ಆಗಿತ್ತು. ಅಲ್ಲದೆ ಆಗಾಗ ಅವರು ಕರ್ನಾಟಕಕ್ಕೆ ಬಂದುಹೋಗುತ್ತಿರುತ್ತಾರಂತೆ. ಇದೀಗ ಅವರೊಂದು ಕನ್ನಡ ಸಿನಿಮಾದಲ್ಲಿ ನಟಿಸುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ
ಬಾಲಿವುಡ್ನಲ್ಲಿ ತಮ್ಮ ಹಾಸ್ಯದಿಂದಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಟ ಗೋವಿಂದ್. 1986ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗೋವಿಂದ್, ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ 35 ವರ್ಷಗಳ ಚಿತ್ರ ಬದುಕಿನಲ್ಲಿ ಒಂದು ತಮಿಳು ಮತ್ತು ಒಂದು ಬಂಗಾಳಿ ಬಿಟ್ಟರೆ, ಮಿಕ್ಕೆಲ್ಲ ಸಿನಿಮಾಗಳು ಹಿಂದಿಯಲ್ಲೇ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಗೋವಿಂದ ಕನ್ನಡಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.