ಮಂಡ್ಯ: ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿ ನಾಪತ್ತೆಯಾಗಿದ್ದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಕಾವೇರಿ ನದಿ ಬಳಿ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭ ದೇವಸ್ಥಾನದ ಕಾವೇರಿ ನದಿಯಲ್ಲಿ ಕಾರು ಇರುವುದನ್ನು ಕಂಡು ಆಶ್ಚರ್ಯಗೊಂಡ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನದಿಯಲ್ಲಿ ಇದ್ದ ಕಾರನ್ನು ಹೊರಕ್ಕೆ ತೆಗೆದಿದ್ದಾರೆ. ಕಾರು ಹೊರಗೆ ತೆಗೆದ ನಂತರ ಅದು ಬಿಎಂಡಬ್ಲ್ಯೂ ಕಾರು ಆದ್ದರಿಂದ ಇಷ್ಟೊಂದು ದುಬಾರಿ ಬೆಲೆಯ ಕಾರನ್ನು ಯಾರು ನೀರಿನಲ್ಲಿ ಮುಳುಗಿಸಿ ಹೋಗಿದ್ದಾರೆ ಎಂದು ಪೊಲೀಸರಿಗೆ ಆಶ್ಚರ್ಯವಾಗಿದೆ. ಇದನ್ನೂ ಓದಿ: ವಿಷಕಾರಿದ್ದ ಅಫ್ರಿದಿ ವಿರುದ್ಧ ಅಮಿತ್ ಮಿಶ್ರಾ ಕಿಡಿ
ನಂತರ ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಗೆ ಕಾರನ್ನು ತೆಗೆದುಕೊಂಡು ಹೋದ ಪೊಲೀಸರು ಅಲ್ಲಿ ಕಾರಿನ ಬಾಗಿಲು ತೆಗೆದು ಈ ಕಾರು ಯಾರದ್ದು ಎಂದು ತಿಳಿಯಲು ಡಾಕ್ಯುಮೆಂಟ್ ಹುಡುಕಾಡಿದ್ದಾರೆ. ನಂತರ ಡಾಕ್ಯುಮೆಂಟ್ವೊಂದು ಸಿಕ್ಕಿದ್ದು ಅದರಲ್ಲಿ ಈ ಕಾರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ರೂಪೇಶ್ ಅವರದೆಂದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪುಟಿನ್ನೊಂದಿಗೆ ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ
ನಂತರ ರೂಪೇಶ್ಗೆ ಈ ಬಗ್ಗೆ ಮಾಹಿತಿ ಮುಟ್ಟಿಸಿ ಆತನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ, ಆತನೇ ಕಾರನ್ನು ನೀರಿನಲ್ಲಿ ಮುಳುಗಿಸಿದ್ದರ ಬಗ್ಗೆ ಒಪ್ಪಿಕೊಂಡಿದ್ದಾನೆ. ರೂಪೇಶ್ ತಾಯಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು, ಅಂದಿನಿಂದ ಇಂದಿನವರೆಗೆ ಆತನ ವರ್ತನೆ ಸರಿ ಇಲ್ಲ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎಂದು ರೂಪೇಶ್ ಸಂಬಂಧಿಕರು, ಸ್ನೇಹಿತರು ಹೇಳಿದ್ದಾರೆ. ಅಲ್ಲದೇ ಆತ ಪೊಲೀಸ್ ಠಾಣೆಗೆ ಬಂದಾಗಿನಿಂದಲೂ ಸರಿಯಾಗಿ ವರ್ತನೆ ಮಾಡುತ್ತಿರಲಿಲ್ಲ. ಆತನಿಗೆ ಮಾನಸಿಕ ಖಿನ್ನತೆ ಇರುವ ಕಾರಣ ಹೀಗೆ ಮಾಡಿರಬಹುದು ಎಂದು ಹೇಳುತ್ತಿದ್ದಾರೆ.