ಚಾಮರಾಜನಗರ: ಆರೋಗ್ಯದಲ್ಲಿ ಸಮಸ್ಯೆಯಿದೆ ಎಂದು ತನ್ನ ಅಳಲು ತೋಡಿಕೊಂಡ ಮಹಿಳೆಗೆ ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದ ಮಂತ್ರವಾದಿ ಮಹಾದೇವಸ್ವಾಮಿಯಿಂದ ಭವ್ಯ ಮೋಸ ಹೋಗಿದ್ದಾಳೆ. ಪ್ರಸ್ತುತ ಮಹಾದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ, 2.5 ಲಕ್ಷ ರೂ. ಹಣ ಮಾಯ ಮಾಡಿದ್ದೇನೆ ಎಂದು ಪೊಲೀಸರಿಗೆ ಹೇಳುತ್ತಿದ್ದಾನೆ. ಇದನ್ನೂ ಓದಿ: ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು, ಚಿನ್ನ ದೋಚಿದ ಖದೀಮರು
ಏನಿದು ಮಾಯ-ಮಂತ್ರದ ಕಥೆ: ಭವ್ಯಾ ಅವರಿಗೆ ಇತ್ತೀಚಿಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಪರಿಣಾಮ ಮಂತ್ರವಾದಿ ಮಹಾದೇವಸ್ವಾಮಿ ಬಳಿ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಮಹಾದೇವಸ್ವಾಮಿ ಮಾಟ-ಮಂತ್ರದ ಕಥೆ ಕಟ್ಟಿ ಪೂಜೆ ಮಾಡಿದರೆ ಸರಿ ಹೋಗಲಿದೆ ಎಂದು ನಂಬಿಸಿದ್ದಾನೆ. ಅದರಂತೆ ಕಳೆದ ಆಗಸ್ಟ್ 9 ರ ರಾತ್ರಿ ಮನೆಗೆ ಬಂದು ಕುಡಿಕೆಯೊಂದನ್ನು ಇಟ್ಟು ಒಡವೆ, ನಗದು ಇದರಲ್ಲಿ ಹಾಕಿ ಪೂಜೆ ನಂತರ ಕೊಡುತ್ತೇನೆ ಎಂದಿದ್ದಾನೆ. ಈತನನ್ನು ನಂಬಿದ ಭವ್ಯ ತನ್ನ ಬಳಿ ಇದ್ದ ಸರ, ಓಲೆ, ಹಣ ಎಲ್ಲವನ್ನೂ ಕುಡಿಕೆಯೊಳಗೆ ಹಾಕಿದ್ದಾಳೆ.
ಬಳಿಕ ಮಹಾದೇವಸ್ವಾಮಿ, ಭವ್ಯಗೆ ಕಪ್ಪು ಬಣ್ಣದ ಚುಕ್ಕೆಯನ್ನು ಹಣೆಗೆ ಇಟ್ಟಿದ್ದಾನೆ. ನಂತರ ಆಕೆ ಮೂರ್ಛೆ ಹೋಗಿದ್ದಾಳೆ. ತಕ್ಷಣ ಅಲ್ಲಿಂದ ಮಹಾದೇವಸ್ವಾಮಿ ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಕಳೆದ ಫೆ.1 ರಂದು ದೂರು ಕೊಟ್ಟಿದ್ದಾಳೆ. ದೂರು ಪಡೆದ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ