ಬೆಂಗಳೂರು: ಆರ್ಎಸ್ಎಸ್ ದೇಶದ ಶ್ರೀಮಂತ ಎನ್ಜಿಓ ಆಗಿದ್ದು, ಅದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಪದರತಿಭಟನೆಯಲ್ಲಿ ಭಾಗವಹಿಸಿ ಸಚಿವರಾದ ಅಶ್ವತ್ಥನಾರಾಯಣ್ ಮೇಲೆ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ. ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನ ಬಹುತೇಕ ಗುತ್ತಿಗೆದಾರರು ಸಚಿವರ ಸಂಬಂಧಿಗಳೇ ಇದ್ದಾರೆ. ಈಗ ಪಿಎಸ್ಐ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ ಎಂದು ಆರೋಪ ವ್ಯಕ್ತಪಡಿಸಿದರು. ಇದನ್ನೂ ಓದಿ: 10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು
ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ. ಭ್ರಷ್ಟಾಚಾರಕ್ಕೆ ಆರ್ಎಸ್ಎಸ್ನ ಕುಮ್ಮಕ್ಕು ಇದೆ. ಅದರ ಹಣದಿಂದಲೇ ಶ್ರೀಮಂತ ಎನ್ಜಿಓ ಆಗಿ ಆರ್ಎಸ್ಎಸ್ ಬೆಳೆಯುತ್ತಿದೆ. ಪ್ರತಿಯೊಬ್ಬ ಸಚಿವರ ಬಳಿ ಆರ್ಎಸ್ಎಸ್ನ ಒಎಸ್ಡಿ ಇದ್ದಾರೆ. ಹಣ ಕಲೆಕ್ಷನ್ ಮಾಡುವುದೇ ಒಎಸ್ಡಿಗಳ ಪೂರ್ಣಾವಧಿಯ ಕೆಲಸವಾಗಿದೆ. ಹಾವಿನಪುರದಲ್ಲಿ ಕುಳಿತು ಅವರು ಹಣ ಕಲೆಕ್ಷನ್ ಮಾಡುತ್ತಾರೆ ಎಂದರು.
ನಿನ್ನೆ ಅಮಿತ್ ಶಾ ಬಂದಿದ್ದರು ಸಹ ಬಿಜೆಪಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. 40% ಕಮಿಷನ್ ಹಾಗೂ ಅಕ್ರಮ ಪಿಎಸ್ಐ ನೇಮಕಾತಿಯಲ್ಲಿ ಅಮಿತ್ ಶಾ ಪಾಲು ತೆಗೆದುಕೊಳ್ಳಲು ಬಂದಿದ್ದಾರೆ. ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ. ಈ ಕೂಡಲೇ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್
ಸ್ವ-ಇಲಾಖೆಯಲ್ಲಿ ಗಂಭೀರವಾದ ಆರೋಪ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೆಂದ್ರ ರಾಜೀನಾಮೆ ನೀಡಬೇಕು. ಸಂಪೂರ್ಣವಾಗಿ ತನಿಖೆಯಾಗಬೇಕು, ಗೃಹ ಸಚಿವರ ಮೇಲೆ ತನಿಖೆ ನಡೆಯಬೇಕು ಎಂದರು.