ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ – ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಆಯ್ಕೆ ನೆನೆಗುದಿಗೆ

Public TV
2 Min Read
bjp leaders

ಬೆಂಗಳೂರು: ವಿಧಾನಸಭೆ ಫಲಿತಾಂಶ ಬಂದು ತಿಂಗಳಾದರೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ (BJP) 66 ಶಾಸಕರು ಆಯ್ಕೆಯಾಗಿ ಪ್ರತಿಪಕ್ಷಕ್ಕೆ ತಳ್ಳಲ್ಪಟ್ಟಿದೆ. ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ (Congress) ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಎಲ್ಲವನ್ನೂ ಮುಗಿಸಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಆದರೆ ಪ್ರತಿಪಕ್ಷ ಬಿಜೆಪಿಯ ವಿಳಂಬ ಧೋರಣೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

NALINKUMAR KATEEL

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಹಜವಾಗಿ ಬಿಜೆಪಿಯಲ್ಲಿ ಪೈಪೋಟಿ ಇದೆ. ಆದರೆ ವರಿಷ್ಠರ ಲೆಕ್ಕಾಚಾರ ಏನು? ಅವರ ಕೃಪೆ ಯಾರ ಮೇಲೆ ಇದೆ ಎನ್ನುವುದು ಮಾತ್ರ ನಿಗೂಢ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಬಸನಗೌಡ ಯತ್ನಾಳ್ (Basanagouda Patil Yatnal), ಡಾ. ಅಶ್ವಥ್‌ ನಾರಾಯಣ್ (Ashwath Narayan), ಸುನಿಲ್ ಕುಮಾರ್ (Sunil Kumar) ಸೇರಿದಂತೆ ಹಲವು ಪ್ರಮುಖರ ಹೆಸರು ಈ ಹುದ್ದೆಗೆ ಕೇಳಿ ಬರುತ್ತಿದೆಯಾದರೂ ಹೈಕಮಾಂಡ್ ಮಾತ್ರ ಏನನ್ನೂ ಹೇಳುತ್ತಿಲ್ಲ. ಇದನ್ನೂ ಓದಿ: ಕಾಂಗ್ರೆಸ್‌ ಜೊತೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ: ಸ್ವಪಕ್ಷೀಯರ ವಿರುದ್ಧವೇ ಪ್ರತಾಪ್‌ ಸಿಂಹ ಅಸಮಾಧಾನ

ಇತ್ತೀಚೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಶಾಸಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವರದಿ ಕೊಂಡೊಯ್ದಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ಬಹುತೇಕ ಪ್ರತಿಪಕ್ಷ ನಾಯಕರಾಗ್ತಾರೆ ಅಂತ ಹೇಳಲಾಗುತ್ತಿದೆಯಾದರೂ, ಯಾರಿಗೂ ಖಚಿತತೆ ಇಲ್ಲ. ಬಿಜೆಪಿ ನಾಯಕರ ಮುಸುಕಿನ ಗುದ್ದಾಟ, ಯಾರಲ್ಲೂ ಒಮ್ಮತ ಇಲ್ಲದಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

bjp flag

ಸಹಜವಾಗಿ ಆಡಳಿತಾರೂಢ ಕಾಂಗ್ರೆಸ್‌ನವರು ಬಿಜೆಪಿಯ ಈ ವಿದ್ಯಮಾನವನ್ನು ಲೇವಡಿ ಮಾಡಲು ತೊಡಗಿದ್ದಾರೆ. ಇದು ಬಿಜೆಪಿಯ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದ್ದು, ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ಮುಗಿಸುವಂತೆ ಒತ್ತಡ ಹೇರ ತೊಡಗಿದ್ದಾರೆ. ಈ ನಡುವೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಬದಲಾವಣೆಗೂ ಕಾಲ ಸನ್ನಿಹಿತವಾಗಿದೆ. ಕಳೆದ ಆಗಸ್ಟ್‌ನಲ್ಲಿ ಅವರ ಅಧಿಕಾರಾವಧಿ ಮುಗಿದಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಮುಂದುವರಿಸಲಾಗಿತ್ತು. ಇದನ್ನೂ ಓದಿ: ಸಚಿವರ ಪುತ್ರನ ದರ್ಬಾರ್ – ತಂದೆಯ ಕ್ಷೇತ್ರದಲ್ಲಿ ಶಕ್ತಿ ಯೋಜನೆಗೆ ಚಾಲನೆ

ಪಕ್ಷದ ಹೀನಾಯ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಈಗ ಜೋರಾಗ ತೊಡಗಿದೆ. ಆದರೂ ರಾಷ್ಟ್ರೀಯ ನಾಯಕರು ಕರ್ನಾಟಕದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಂತ ರಾಜ್ಯದ ನಾಯಕರು ಕೂಡ ವರಿಷ್ಠರ ಮೇಲೆ ಒತ್ತಡ ಹಾಕುವುದಿರಲಿ, ಪ್ರಶ್ನಿಸುವ ಗೋಜಿಗೂ ಹೋಗಿಲ್ಲ. ಈ ಎಲ್ಲ ಕಾರಣಗಳಿಂದ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳೂ ಸೇರಿದಂತೆ ಯಾವುದೇ ಜವಾಬ್ದಾರಿಯನ್ನು ಹಂಚುವ ಪ್ರಕ್ರಿಯೆ ನಡೆಯುತ್ತಿಲ್ಲ. ಜುಲೈ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರಲ್ಲಿ ಕನಿಷ್ಟ ಪ್ರತಿಪಕ್ಷ ನಾಯಕ ಯಾರು ಎನ್ನುವ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಘೋಷಿಸಬೇಕಿದೆ.

Share This Article