ಬೆಂಗಳೂರು: ಎಷ್ಟೇ ಸಿದ್ದರಾಮೋತ್ಸವ ಮಾಡಿದರೂ ಮುಂದಿನ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮೋತ್ಸವ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ 5 ವರ್ಷದ ಆಡಳಿತದಲ್ಲಿ ಜನ ಸಾಕಷ್ಟು ನೋವು ಅನುಭವಿಸಿದ್ದಾರೆ. ಜಾತಿ ಜಾತಿಗಳನ್ನ ಒಡೆಯೊ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಅಲ್ಪಸಂಖ್ಯಾತರನ್ನ ಬಹುಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ
ಟಿಪ್ಪು ಜಯಂತಿ ಮಾಡಿದ್ದು ಸಿದ್ದರಾಮಯ್ಯ, 30ಕ್ಕೂ ಹೆಚ್ಚು ಕೊಲೆಗಳು ಅವರ ಕಾಲದಲ್ಲಿ ಆಯ್ತು. ಅಲ್ಲದೇ ಭ್ರಷ್ಟಾಚಾರ ಇದ್ದದ್ದೂ ಅವರ ಕಾಲದಲ್ಲೇ, ಈಗ ಮತ್ತೆ ಕಾಂಗ್ರೆಸ್ ಏನೋ ಮಾಡ್ತಾರೆ ಅಂತ ಜನರಿಗೆ ಭ್ರಮೆಯಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ
ಬಿಜೆಪಿ ಸರ್ಕಾರದಲ್ಲಿ ಸಣ್ಣ ಪುಟ್ಟ ಲೋಪ ಇರಬಹುದು. ಆದರೆ ಕಾಂಗ್ರೆಸ್ ಗಿಂತ ಬಿಜೆಪಿ ಬೆಟರ್ ಅಂತ ಜನರಿಗೆ ಅನ್ನಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ ಉತ್ತಮವಾಗಿ ಆಡಳಿತ ನೀಡುತ್ತಿದ್ದಾರೆ. ಜನ ಸೇರಿಸಿ ಏನೋ ಮಾಡಿದ್ರು ಅಂತ, ಕಾಂಗ್ರೆಸ್ ಓಟ್ ಹಾಕ್ತಾರೆ ಅನ್ನೋ ಭ್ರಮೆ ಬೇಡ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
2023 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಜನರು ಬಿಜೆಪಿ ಜೊತೆ ಇದ್ದಾರೆ. ಮೋದಿ ಆಡಳಿತ ಜೊತೆ ಡಬಲ್ ಎಂಜಿನ್ ಸರ್ಕಾರ ಬೇಕು ಅಂತ ಜನರಿಗೆ ಅನ್ನಿಸಿದೆ. ಹೀಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.