ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

Public TV
2 Min Read
BY Vijayendra 1

ಬೆಂಗಳೂರು: ರಾಹುಲ್ ಗಾಂಧಿಯವರು (Rahul Gandhi) ಚುನಾವಣಾ ಅಕ್ರಮದ ಬಗ್ಗೆ ಹೇಳಿಕೆ ನೀಡಿ ದೇಶ ಮತ್ತು ರಾಜ್ಯದ ಮತದಾರರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಆ.5ರಂದು ವಿಧಾನಸೌಧದ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ.

ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಬಳಿಕ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ನೀಡಲಿದ್ದೇವೆ. ರಾಹುಲ್ ಗಾಂಧಿಯವರು ಇದೇ 5ರಂದು ಬೆಂಗಳೂರಿನಲ್ಲಿ ನಾಟಕ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಇದನ್ನೂ ಓದಿ: ಜಮ್ಮು ಕಾಶ್ಮೀರ ಭೂಕುಸಿತ – ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌, ಪುತ್ರ ಸಾವು

ಪಕ್ಷದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಜನರಿಗೆ ತಿಳಿಸುವ ಉದ್ದೇಶವಿದೆ. ರಾಹುಲ್ ಗಾಂಧಿಯವರು ಬರುತ್ತಾರೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಶುಕ್ರವಾರ ಫ್ರೀಡಂ ಪಾರ್ಕಿನಲ್ಲಿ ಕಾಂಪೌಂಡನ್ನು ಒಡೆದು ಹಾಕಿ, ಅಲ್ಲಿದ್ದ ಮರವನ್ನೂ ಕಡಿದು ಹಾಕಿಸಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿಗಳು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ (Congress) ಪಕ್ಷ ರಾಜ್ಯ ಮತ್ತು ದೇಶದಲ್ಲಿ ಒಂದು ಹೊಸ ಚರ್ಚೆ ಮತ್ತು ಹೊಸ ವರಸೆ ಪ್ರಾರಂಭ ಮಾಡಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕಾಂಗ್ರೆಸ್ಸಿನ ಮಾರ್ಗದರ್ಶನವಿಲ್ಲದ ಕ್ಷಿಪಣಿಯಂತಿರುವ ಸುಪ್ರೀಂ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವೂ ಒಳಗೊಂಡಂತೆ ಬೇರೆ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಪಕ್ಷ ಚುನಾವಣಾ ಆಯೋಗದ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹತಾಶರಾಗಿರುವ ರಾಹುಲ್ ಗಾಂಧಿಯವರ ಕಪಟ ನಾಟಕ:
ರಾಹುಲ್ ಗಾಂಧಿ ಅವರು ಗೊಂದಲದಲ್ಲಿದ್ದಾರೆ. ಸೋಲಿನ ಅವಮಾನ ಮತ್ತು ಹತಾಶರಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ದೇಶದ ಜನರ ವಿಶ್ವಾಸವನ್ನು ಪಡೆದುಕೊಳ್ಳುವಲ್ಲಿ ವಿಫಲರಾದ ರಾಹುಲ್ ಗಾಂಧಿಯವರು ಒಂದು ಕಪಟ ನಾಟಕವನ್ನು ಪ್ರಾರಂಭ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಚುನಾವಣೆಗಳಲ್ಲಿ ಅಕ್ರಮ ನಡೆದಿರುವುದಕ್ಕೆ ನನ್ನ ಬಳಿ 100 ಪ್ರತಿಶತ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವನಿಗೂಡಿಸಿದ್ದಾರೆ. ಅವರ ಬಳಿ ಚುನಾವಣೆಯಲ್ಲಿ ಅಕ್ರಮವಾಗಿರುವ ಬಗ್ಗೆ ಮತ್ತು ಚುನಾವಣಾ ಆಯೋಗದ ದುರ್ಬಳಕೆಯಾಗಿರುವ ಕುರಿತು ಪುರಾವೆಯಿದ್ದರೆ ಅದನ್ನು ರಾಜ್ಯ ಹೈಕೋರ್ಟ್ಗೆ ಅಥವಾ ಸುಪ್ರೀಂ ಕೋರ್ಟ್ಗೆ ನೀಡಿ ಪ್ರಶ್ನಿಸಬಹುದಾಗಿತ್ತು ಎಂದರು.ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

Share This Article