ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಆದರೆ ಬಿಜೆಪಿ ನಾಯಕರು ಬ್ರೈನ್ ವಾಶ್ ಮಾಡಿದ್ದಾರೆ. ಈಗಲೂ ರಮೇಶ್ ಅವರು ಪಕ್ಷ ಬಿಟ್ಟು ಹೋಗಲ್ಲ ಎಂಬ ವಿಶ್ವಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರೆಸಾರ್ಟಿನಲ್ಲಿ ಏರ್ಪಡಿಸಿದ್ದ ಸಭೆಯ ಬಳಿಕ ಮಾತನಾಡಿದ ಅವರು, ನಮ್ಮ ಶಾಸಕರ ವಿರುದ್ಧ ಬಿಜೆಪಿ ನಾಯಕರು ಕುತಂತ್ರ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಹಾಗು ರಾಷ್ಟ್ರ ನಾಯಕರ ಸಹಾಯದಿಂದಲೇ ಕೃತ್ಯ ನಡೆದಿದೆ. ನಮ್ಮ ಶಾಸಕರಿಗೆ ಆಸೆ ತೋರಿಸಿ ಬ್ರೈನ್ ವಾಶ್ ಮಾಡಿದ್ದಾರೆ. ಸಿಎಲ್ಪಿ ಸಭೆಗೆ ಗೈರಾದ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದು, ಈಗಲೂ ರಮೇಶ್ ಜಾರಕಿಹೊಳಿ ಅವರು ಪಕ್ಷದಲ್ಲೇ ಮುಂದುವರಿಯುತ್ತಾರೆ ಎಂಬ ವಿಶ್ವಾಸವಿದೆ. ಏಕೆಂದರೆ ಅವರು 1999 ರಿಂದಲೂ ನನ್ನೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಸೂಕ್ತ ಉತ್ತರ ನೀಡದಿದ್ದರೆ, ಪಕ್ಷ ಕ್ರಮಕೈಗೊಳ್ಳಲಿದೆ ಎಂದರು.
ನಾಳೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸುತ್ತಾರೆ. ಅವರು ಶಾಸಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಬಳಿಕ ಇಲ್ಲಿಂದ ತೆರಳುವ ಕುರಿತು ನಿರ್ಧಾರ ಮಾಡುತ್ತೇವೆ ಎಂದರು.
ಕಳೆದ 10 ದಿನಗಳಿಂದ ರೆಸಾರ್ಟಿನಲ್ಲಿದ್ದ ಬಿಜೆಪಿ ಶಾಸಕರು ಈಗ ಬರ ಅಧ್ಯಯನ ನಡೆಸಲು ಮುಂದಾಗಿದ್ದಾರೆ. ಆದರೆ ಶಾಸಕರನ್ನ ಇಷ್ಟು ದಿನ ರೆಸಾರ್ಟ್ ಗೆ ಕರೆದ್ಯೊದದ್ದು ಏಕೆ. ದೇವರು ಯಡಿಯೂರಪ್ಪ ಅವರಿಗೆ ಏಕೆ ಕೆಟ್ಟ ಬುದ್ಧಿ ನೀಡಿದ್ದಾರೆ ಎಂಬುವುದ ನನಗೆ ಅರ್ಥವಾಗುತ್ತಿಲ್ಲ. ಬಿಎಸ್ವೈ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದವರು, ಈಗ ಅದನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಭೆಯಲ್ಲಿ ಸರ್ಕಾರ ಮುಂದಿನ ಬಜೆಟ್ ಹಾಗೂ ಲೋಕಸಭಾ ಚುನಾವಣೆ ಕುರಿತು ಕೂಡ ಚರ್ಚೆ ಮಾಡಲಾಯಿತು. ನಾವು ರೆಸಾರ್ಟಿಗೆ ಬರಲು ಬಿಜೆಪಿಯೇ ಕಾರಣ. ಅವರ ಕುತಂತ್ರದ ವಿರುದ್ಧ ತೀರ್ಮಾನ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ. ಆದರೆ ನಾವು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ನಮಗೇ ನಮ್ಮದೆ ಆದ ಬಲ ಇದೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ನಡೆಯಬಾರದು ಎಂಬ ದುರುದ್ದೇಶದಿಂದ ಬಿಜೆಪಿ ಈ ರೀತಿ ಮಾಡುತ್ತಿದೆ. ರಾಜ್ಯದ ಜನತೆ ಇದನ್ನೆಲ್ಲಾ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv