ಬಹಿರಂಗ ಚರ್ಚೆಗೆ ನಾವು ಸಿದ್ಧ – ಸಿದ್ದರಾಮಯ್ಯ ಸವಾಲು ಸ್ವೀಕರಿಸಿದ ಬಿಜೆಪಿ

Public TV
2 Min Read
SIDDARAMAIAH BJP

ಮೈಸೂರು: ಬಿಜೆಪಿಯ ರಾಜ್ಯ ಸಂಸದರು ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಬಿಜೆಪಿಯವರು ಬರುತ್ತಾರಾ ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸವಾಲನ್ನು ಬಿಜೆಪಿ ಸ್ವೀಕರಿಸಿದೆ.

ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಾಮದಾಸ್ ಅವರು ಸೂಕ್ತ ದಾಖಲೆಗಳನ್ನು ಜನರ ಮುಂದಿಟ್ಟು ಚರ್ಚೆ ಮಾಡೋಣ ಎಂದು ಬಿಜೆಪಿ ಶಾಸಕ ರಾಮದಾಸ್ ಪ್ರತಿ ಸವಾಲು ಎಸೆದಿದ್ದಾರೆ. ಇದನ್ನು ಓದಿ: ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದೆಂದು ಹೇಳಿ ತಿರುಗುತ್ತಿದ್ದಾನೆ – ಸಿದ್ದರಾಮಯ್ಯ 

pratap simha

ಬಿಜೆಪಿ ಸಂಸದರ ಕೆಲಸದ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಾಗಿದ್ದೇವೆ. ಮೈಸೂರಿಗೆ ರಾಜ್ಯದ ಎಲ್ಲಾ ಬಿಜೆಪಿ ಸಂಸದರರನ್ನು ಕರೆಸುತ್ತೇವೆ. ನಿಮ್ಮ ಯುಪಿಎ ಹಾಗೂ ನಮ್ಮ ಸರ್ಕಾರದ ಸಾಧನೆ ಬಗ್ಗೆಯೂ ಚರ್ಚೆ ಮಾಡೋಣ. ದಾಖಲಾತಿಗಳ ಜೊತೆಗೆ ಚರ್ಚೆ ಮಾಡೋಣ ಬನ್ನಿ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಮಯ ಹಾಗೂ ಸ್ಥಳ ನಿಗದಿ ಮಾಡುವಂತೆ ನಾನೇ ಕೋರುತ್ತೇನೆ. ದೇಶದ ಮೇಲೆ ಆಗಿರುವ ಭಯೋತ್ಪಾದಕ ದಾಳಿಯ ಬಗ್ಗೆಯೂ ಕೂಡ ಇದೇ ವೇಳೆ ಚರ್ಚೆ ನಡೆಸಲು ನಾವು ಸಿದ್ಧ ಎಂದಿದ್ದಾರೆ.

siddaramaiah garam

ಇಂದು ಮೈಸೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಪಡಿಸುವಾಗ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದ? ಮೈಸೂರಿಗೆ ಅವನ ಕೊಡುಗೆ ಏನು? ನಾವು ಮಾಡಿದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ನಾನು ಪ್ರತಾಪ್ ಸಿಂಹ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಅಷ್ಟೇ ಅಲ್ಲ ಬಿಜೆಪಿಯ ರಾಜ್ಯ ಸಂಸದರು ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.

ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದ ಧ್ರುವನಾರಾಯಣ ಅವರ ಜೊತೆಗೆ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಬಿಜೆಪಿಯವರು ಬರುತ್ತಾರಾ? ಸಂಸದೆ ಶೋಭಾ ಕರಂದ್ಲಾಜೆ ಬರುತ್ತಾರಾ? ಇಲ್ಲವೇ ಸಂಸದರಾದ ನಳಿನ್ ಕುಮಾರ್ ಹಾಗೂ ಅನಂತಕುಮಾರ್ ಹೆಗ್ಡೆ ಚರ್ಚೆಗೆ ಬರುತ್ತಾರಾ? ಬಿಜೆಪಿ ಸಂಸದರು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *