ಬೆಂಗಳೂರು: ಈಚೆಗೆ ಪಕ್ಷದಲ್ಲಿ ಉಲ್ಬಣಗೊಂಡಿರುವ ಆಂತರಿಕ ಕಚ್ಚಾಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ದೂರು ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ತಂಡಕ್ಕೆ ಬ್ರೇಕ್ ಹಾಕಿ ಎಂದು ಮನವಿ ಮಾಡಿದ್ದಾರೆ.
ಬುಧವಾರ ರಾತ್ರಿ ಅಮಿತ್ ಶಾ ಅವರಿಗೆ ವಿಜಯೇಂದ್ರ ಭೇಟಿಯಾಗಿದ್ದರು. ಇದೇ ವೇಳೆ, ರಾಜ್ಯದಲ್ಲಿ ಕಳೆದೊಂದು ವರ್ಷದ ಪಕ್ಷ ಸಂಘಟನೆ, ಹೋರಾಟ ಕುರಿತು ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.
ತಮ್ಮ ಒಂದು ವರ್ಷದ ಸಾಧನೆಯ ವರದಿ ಕೊಡುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಯತ್ಬಾಳ್ ತಂಡದ ಎರಡನೇ ಹಂತದ ವಕ್ಫ್ ಹೋರಾಟ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದರು.
ಈ ವರ್ಷಾರಂಭದಿಂದ ಪಕ್ಷದ ವತಿಯಿಂದ ಕೈಗೊಳ್ಳಲಿರುವ ಹೋರಾಟಗಳ ಬಗ್ಗೆ ಪ್ರತ್ಯೇಕ ವರದಿ ಕೂಡ ಸಲ್ಲಿಸಿದ್ದಾರೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆಗೂ ಸಂಬಂಧ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಬಿಜೆಪಿಯ ಹೋರಾಟ, ಕಲಬುರ್ಗಿ ಪ್ರತಿಭಟನೆ ಬಗ್ಗೆಯೂ ತಿಳಿಸಿದ್ದಾರೆ. ಹಾಗೆಯೇ, ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಸರ್ಕಾರದ ಲೋಪಗಳು, ನಿರ್ಲಕ್ಷ್ಯ, ಬಿಜೆಪಿ ಹೋರಾಟ ಕುರಿತೂ ಗಮನ ಸೆಳೆದಿದ್ದಾರೆ.
ಉಳಿದ ಮೂರು ವರ್ಷದ ಅವಧಿಗೂ ತಾವೇ ರಾಜ್ಯಾಧ್ಯಕ್ಷ ಆಗುವ ನಿಟ್ಟಿನಲ್ಲಿ ವಿಜಯೇಂದ್ರ ಕಸರತ್ತು ನಡೆಸಿದ್ದಾರೆ. ಇತ್ತೀಚೆಗೆ ಮೋದಿಯವರನ್ನು ಭೇಟಿ ಮಾಡಿದ್ದರು.