ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ- ಸರ್ಕಾರದ ವಿರುದ್ಧ ಕಮಲ ನಾಯಕರ ವಾಗ್ದಾಳಿ

Public TV
3 Min Read
BJP Protest

– ಅತ್ಯಂತ ಹದಗೆಟ್ಟ ಕಾನೂನು ಸುವ್ಯವಸ್ಥೆ ಅಂದ್ರು ಡಿವಿಎಸ್

ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ (DV Sadananda Gowda) ಅವರು ಟೀಕಿಸಿದರು.

ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ನಗರದ ಸ್ವಾತಂತ್ರ‍್ಯ ಉದ್ಯಾನವನದ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ. ರಸ್ತೆಗುಂಡಿಯಲ್ಲಿ ಬಿದ್ದು ಸಾಯುವ ಭಯದಿಂದ ಹಿರಿಯರು ನೆಮ್ಮದಿಯಿಂದ ಓಡಾಡಲು ಸಾಧ್ಯವಿಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈ ನಡುಗುತ್ತಿದೆ ಅಂತಾ ಟೀಕಿಸಿದ ಬಿಜೆಪಿ ವಿರುದ್ಧ ನವೀನ್ ಪಟ್ನಾಯಕ್ ಕಿಡಿ

BJP Protest 2

ಸೋಮವಾರ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲಾ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಭಾರೀ ವಿರೋಧ ಬೆನ್ನಲ್ಲೇ ಸೆಕ್ಯೂರಿಟಿ ಕಂಪನಿಗೆ ನೀಡಿದ್ದ ಶಿಕ್ಷಕರ ನೇಮಕಾತಿ ಟೆಂಡರ್ ರದ್ದು

ತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೆ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರ್ಕಾರ ಸರಿದಾರಿಗೆ ಬರದೇ ಇದ್ದರೆ ಅದನ್ನು ಸರಿದಾರಿಗೆ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭಾಷಣದ ನಡುವೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ!- ವೀಡಿಯೋ ವೈರಲ್‌

ಬೆಂಗಳೂರಿನ ಕಡೆಗಣನೆ: ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಬ್ರ‍್ಯಾಂಡ್ ಬೆಂಗಳೂರು ಮೂಲಕ ಸಿಂಗಾಪುರ, ಅಮೆರಿಕದ ನ್ಯೂಯಾರ್ಕ್ ಥರ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಒಂದು ವರ್ಷವಾದರೂ ಒಂದು ರೂ. ಹಣವನ್ನು ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?

BJP Protest 1

ರಾಜ್ಯದ 60%ರಿಂದ 65% ತೆರಿಗೆ ಬೆಂಗಳೂರಿನಿಂದ ಸಂಗ್ರಹವಾಗುತ್ತಿದೆ. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಬೆಂಗಳೂರಿನ ಜನತೆ ಬೆಂಗಳೂರಿನ ತೆರಿಗೆ ಬೆಂಗಳೂರಿಗರ ಹಕ್ಕು ಎಂದು ಹೋರಾಟ ಮಾಡಲು ಸಿದ್ಧರಾಗುವಂತಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ- 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್‌ಐಆರ್

ಮಳೆಯ ಟ್ರೈಲರ್ ಇದು. ಮಳೆಗಾಲ ಆರಂಭವಾಗುವಾಗಲೇ ರಸ್ತೆಗಳು ಹೊಂಡ ಗುಂಡಿಯಿಂದ ಕೂಡಿದೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಕಸ ಎತ್ತುವವರಿಗೆ ಜನವರಿಯಿಂದ ಸಂಬಳ ಕೊಟ್ಟಿಲ್ಲ. ಮುಖ್ಯಮಂತ್ರಿಯವರು ಮೊನ್ನೆ ಒಣಗಿದ ಮರ ತೆಗೆಸಲು ಸೂಚಿಸಿದ್ದರು. ಸಿಎಂ ಹೇಳಿದ್ದಾರೆಂದು ಒಂದಾದರೂ ಮರ ತೆಗೆದಿದ್ದರೆ ಸಾಕ್ಷಿ ತೋರಿಸಿ ಎಂದು ಸವಾಲೆಸೆದರು. ಇದನ್ನೂ ಓದಿ: ಪರಿಷತ್ ಆಯ್ಕೆಗೆ ದೆಹಲಿಯಲ್ಲಿ ಮಾನದಂಡ ನಿಗದಿ: ಡಿಕೆಶಿ

ಇದು ಎಚ್ಚರಿಕೆ ಗಂಟೆ ಎಂದ ಅಶ್ವಥ್ ನಾರಾಯಣ್:
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮಾತನಾಡಿ, ಬೆಂಗಳೂರಿನ ಜನತೆಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಈ ಪ್ರತಿಭಟನೆ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಗಂಟೆ. ಆಶಾದಾಯಕ, ಭರವಸೆದಾಯಕ ನಗರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದ್ದು, ಈ ಸರ್ಕಾರಕ್ಕೆ ಪ್ರಜ್ಞೆ ಇದೆಯೇ ಎಂದು ಟೀಕಿಸಿದರು. ಇದು ಅತ್ಯಂತ ಕೆಟ್ಟ- ಭ್ರಷ್ಟ ಸರ್ಕಾರ. ಗುತ್ತಿಗೆದಾರರ ರಕ್ತ ಹೀರುವ ಸರ್ಕಾರ ಎಂದು ದೂರಿದರು. ಇದನ್ನೂ ಓದಿ: ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

Share This Article