ಚಿಕ್ಕಮಗಳೂರು: ಸಿಂದಗಿ-ಹಾನಗಲ್ ಉಪಚುನಾವಣೆಯಲ್ಲಿ ನಾವು ಜನಾದೇಶವನ್ನ ಸ್ವಾಗತಿಸುತ್ತೇವೆ. ಇವಿಎಂ ಅನ್ನ ದೂರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರೆ ವಿಪಕ್ಷ ನಾಯಕರು ಇವಿಎಂ ಮೇಲೆ ದೂರುತ್ತಿದ್ದರು. ಆದರೆ ನಾವು ಖಂಡಿತ ಇವಿಎಂ ಮೇಲೆ ಕಂಪ್ಲೆಂಟ್ ಮಾಡುವುದಿಲ್ಲ. ಜನಾದೇಶವನ್ನ ಸ್ವೀಕಾರ ಮಾಡುತ್ತೇವೆ ಎಂದಿದ್ದಾರೆ.
ಸಿಂದಗಿಯಲ್ಲಿ 31000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದರೆ, ಹಾನಗಲ್ನಲ್ಲಿ ವಿರೋಚಿತವಾದ ಹೋರಾಟ ಕೊಟ್ಟಿದ್ದೇವೆ. ನಮಗೆ ಕರ್ನಾಟಕದಲ್ಲಿ ಮಿಶ್ರ ಫಲಿತಾಂಶ. ಒಂದು ಕಡೆ ಭರ್ಜರಿ ಜಯ, ಮತ್ತೊಂದೆಡೆ ನಿರೀಕ್ಷೆಯಂತೆ ಗೆಲ್ಲಲು ಸಾಧ್ಯವಾಗಿಲ್ಲ. ಗೆದ್ದ ಇಬ್ಬರಿಗೂ ಅಭಿನಂದಿಸಿ ಎಲ್ಲಾದರೂ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಕರೆಕ್ಷನ್ ಎಂಬುದು ನಿರಂತರವಾಗಿರುವ ಪ್ರಕ್ರಿಯೆ. ನಾವು ಇದನ್ನು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಭಾವಿಸುವುದಿಲ್ಲ. ಮಾನೆ, ವ್ಯಕ್ತಿಗತವಾಗಿ ಸೋತ ದಿನದಿಂದ ಕ್ಷೇತ್ರದಲ್ಲಿ ಸಂಪರ್ಕದಲ್ಲಿದ್ದರು. ನಮ್ಮಲ್ಲಿ ನಾಮಪತ್ರ ಸಲ್ಲಿಸುವ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದೇ ಇರುವುದು ಭಾಗಶಃ ಪರಿಣಾಮ ಬೀರಿದೆ ಎಂದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ
ಇದೇ ವೇಳೆ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸತ್ಯ ಹೇಳಿದರೆ ಅವರಿಗೆ ಬೇಸರ. ಸತ್ಯ ಯಾವಾಗಲೂ ಕಹಿಯಾಗಿರುತ್ತೆ. ಜೆಡಿಎಸ್ಗೆ ಆ ಭಾಗದ ಎರಡೂ ಕ್ಷೇತ್ರದಲ್ಲೂ ಸಂಘಟನೆ ಇರಲಿಲ್ಲ. ಅಲ್ಲಿ ಮಾಜಿ ಶಾಸಕರ ಕಾರಣಕ್ಕೋಸ್ಕರ ಅವರ ನಿಧನದಿಂದ ಸಿಂಪತಿ ಕಾರಣಕ್ಕೆ ಒಂದು ಜಯ ಸಿಕ್ಕಿತ್ತು. ಈ ಬಾರಿ ಅವರ ಮಗನೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಬಿಜೆಪಿ 31,000 ಲೀಡ್ ನಲ್ಲಿ ಗೆದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್ಡಿಡಿ ಆರೋಪ
ಆರ್ಗನೈಸೇಷನ್, ಐಡಿಯಾಲಜಿ ಹಾಗೂ ನೇತೃತ್ವ ಇಲ್ಲದಿದ್ರೆ ಏನಾಗಬೇಕೋ ಅದೇ ಆಗುತ್ತೆ. ಹಾನಗಲ್ನಲ್ಲಿ ಸಾವಿರಕ್ಕೂ ಕಡಿಮೆ ಮತ ಬಂದಿದೆ ಅಂದರೆ, ಅವರು ಭವಿಷ್ಯದ ರಾಜಕಾರಣದ ಬಗ್ಗೆ ಯೋಚಿಸಬೇಕು. ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾರೆ ಎಂದು ಆಶಾವಾದ ಇಟ್ಟುಕೊಂಡಿರುವವರು ಆಲೋಚಿಸಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.