ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅಪಘಾತ ಪ್ರಕರಣದ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳ್ಕರ್ ಅವರು ಬೇಗ ಗುಣಮುಖರಾಗಲಿ. ಆದರೆ ಎಲ್ಲ ಸೆಕ್ಯೂರಿಟಿ ಬಿಟ್ಟು ಯಾಕ್ ಹೋಗಿದ್ರಿ? ಆ ಡ್ರೈವರ್ ಯಾರು? ಎಲ್ಲಿದ್ದಾನೆ? ಬಹಿರಂಗಪಡಿಸಿ ಅಂತಾ ಆಗ್ರಹಿಸಿದ್ದಾರೆ.
ನಾಯಿ ಎದುರು ಬಂದಾಗ ಘಟನೆ ಆಯ್ತು ಅಂತೀರಿ? ಹಿಂದಿನಿಂದ ಬಂದು ಗುದ್ದಿದ್ದಾರೆ ಅಂದ್ರಿ. ಹಾಗಾದ್ರೆ ಯಾವುದು ಸತ್ಯ? ಟಿಪಿ ಕೂಡ ಹಾಕಿಲ್ಲ. ಎಸ್ಕಾರ್ಟ್ ಕೂಡ ಇಲ್ಲ. ಬಹಳಷ್ಟು ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗ್ತಿತ್ತು. ದೂರು ದಾಖಲಾಗಿಲ್ಲ. ಎಫ್ಐಆರ್ ಕೂಡ ಆಗಿಲ್ಲ. ಯಾಕೆ? ಪೊಲೀಸ್ ಬೆಂಗಾವಲಿನಲ್ಲಿ ಕಾರ್ ಲಿಫ್ಟ್ ಮಾಡಿದ್ದು ಯಾಕೆ ತರಾತುರಿಯಲ್ಲಿ ಎಂದು ಪ್ರಶ್ನಿಸಿದರು.
ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು. ಅದರಲ್ಲಿ ಯಾರೆಲ್ಲ ಪ್ರಯಾಣ ಮಾಡ್ತಿದ್ರು, ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅದರಲ್ಲಿ ಬಹಳ ಹಣ ಇತ್ತು ಅಂತಾ ಜನ ನಮಗೆ ಹೇಳ್ತಿದಾರೆ. ಯಾವುದನ್ನೂ ಮಹಜರು ಮಾಡದೇ ಆ ಬ್ಯಾಗ್ಗಳನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.