– ಕುಡಿದವ ಆಸ್ಪತ್ರೆಗೆ ದಾಖಲು
ಕೊಲ್ಕತ್ತಾ: ಕೊರೊನಾ ವೈರಸ್ಗೆ ರಾಮಬಾಣ ಅಂತೇಳಿ ಸಾರ್ವಜನಿಕರಿಗೆ ಗೋಮೂತ್ರ ಕುಡಿಸಿದ್ದ ಬಿಜೆಪಿ ಮುಖಂಡನೊರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಗೋಮೂತ್ರ ಕುಡಿದು ಆಸ್ಪತ್ರೆಗೆ ದಾಖಲಾದ ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕೋಲ್ಕತ್ತಾದ ಜೋರಸಖೋ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಬಿಜೆಪಿ ಕಾರ್ಯಕರ್ತ ನಾರಾಯಣ್ ಚಟರ್ಜಿ ಬಂಧಿತ ವ್ಯಕ್ತಿ. ಸೋಮವಾರ ನಾರಾಯಣ್ ಚಟರ್ಜಿ ಹಸುವಿನ ಆರಾಧನೆ ಆರಂಭಿಸಿದ್ದ ಪೂಜೆ ಬಳಿಕ ಹಸುವಿನ ಮೂತ್ರದಲ್ಲಿ ಪವಾಡ ಅಂಶಗಳಿದೆ, ಔಷಧಿಯ ಗುಣಗಳಿದೆ ಎಂದು ಅಲ್ಲಿಂದ ಸ್ಥಳೀಯ ಜನರು ಮತ್ತು ಕಾರ್ಯಕರ್ತರಿಗೆ ಗೋಮೂತ್ರ ವಿತರಣೆ ಮಾಡಿದ್ದ.
ಗೋಮೂತ್ರ ಸೇವಿಸಿದ್ದ ಕೆಲವು ಸ್ಥಳೀಯ ನಾಗರಿಕರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಾರಾಯಣ್ ಚಟರ್ಜಿ ವಿರುದ್ಧ ಸ್ಥಳೀಯ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದರು. ನಾರಾಯಣ್ ಚಟರ್ಜಿ ಬಂಧನಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಗೋಮೂತ್ರ ವಿತರಣೆ ಮಾಡುವಾಗಲೇ ಅದು ಗೋಮೂತ್ರ ಎನ್ನುವುದನ್ನು ಜನರಿಗೆ ತಿಳಿಸಲಾಗಿತ್ತು. ಇಲ್ಲಿ ಜನರನ್ನು ಮರುಳು ಮಾಡುವ ಪ್ರಯತ್ನ ಮಾಡಿಲ್ಲ. ಇದಲ್ಲದೇ ಗೋಮೂತ್ರ ಹಾನಿಕಾರಕ ಎಂದು ಎಲ್ಲೂ ಸಾಬೀತಾಗಿಲ್ಲ ಹೀಗಾಗಿ ಕಾರಣವಿಲ್ಲದೇ ನಾರಾಯಣ್ ಚಟರ್ಜಿ ಬಂಧಿಸಿರುವ ಪೊಲೀಸರ ನಡೆ ಪ್ರಜಾಪ್ರಭುತ್ವ ವಿರೋಧಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಹೇಳಿದ್ದಾರೆ.