ಬೆಂಗಳೂರು: ದಿನಕ್ಕೊಂದು ಪ್ರಹಸನ, ಕ್ಷಣಕ್ಕೊಂದು ವಿದ್ಯಮಾನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳದಿರುವ ಕರ್ನಾಟಕದ ರಾಜಕೀಯ ಬೃಹನ್ನಾಟಕಕಕ್ಕೆ ಇಂದು ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆಯಿದೆ. ದೋಸ್ತಿ ಸರ್ಕರ ಪತನದ ತಾರ್ಕಿಕ ಅಂತ್ಯ ತಲುಪಿಸುತ್ತೇವೆ ಎಂಬ ಧೃಡ ನಿಶ್ಚಯ ಬಿಜೆಪಿ ನಾಯಕರದಾಗಿದ್ದರೆ, ಆಪರೇಷನ್ ಕಮಲ ವಿಫಲಗೊಳಿಸುವೆ ಎಂಬ ಸಂಕಲ್ಪ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಜನಪ್ರಿಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.
ಮಧ್ಯಾಹ್ನ 12.35ಕ್ಕೆ ಹಣಕಾಸು ಸಚಿವರಾಗಿರುವ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ರೈತರಿಗೆ, ಸರ್ಕಾರಿ ನೌಕರರಿಗೆ ಹೆಚ್ಚಿನ ಬಂಪರ್ ಸಿಗುವ ನಿರೀಕ್ಷೆಯಿದ್ದು, ಲೋಕಸಭೆಯ ಚುನಾವಣೆ ಹಳಿಯ ಮೇಲೆ ಬಜೆಟ್ ಮಂಡನೆ ಸಾಧ್ಯತೆ ಹೆಚ್ಚಿದೆ.
ಈ ನಡುವೆ ಈ ಬಾರಿ ಸಂಸತ್ತಿನ ಮಾದರಿಯಲ್ಲಿ ಬಜೆಟ್ ಪ್ರತಿ ನೀಡಲು ನಿರ್ಧಾರ ಮಾಡಿದ್ದಾರೆ. ಬಿಜೆಪಿ ಗಲಾಟೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯ ಆರಂಭದಲ್ಲಿಯೇ ಬಜೆಟ್ ಪ್ರತಿ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಸತ್ತಿನ ಮಾದರಿಯಲ್ಲಿ ಹಣಕಾಸು ಸಚಿವರು ಬಜೆಟ್ ಓದಿ ಮುಗಿದ ಬಳಿಕ ಶಾಸಕರು, ಮಾಧ್ಯಮಗಳಿಗೆ ಬಜೆಟ್ ಪ್ರತಿ ನೀಡಲಾಗುತ್ತದೆ.
ಜೆಡಿಎಸ್ ಕಾಂಗ್ರೆಸ್ ನಡೆ ಏನು?
* ಬಜೆಟ್ ಮಂಡನೆ ವೇಳೆ ಬಿಜೆಪಿ ಶಾಸಕರು ಗಲಾಟೆ ಮಾಡಿದ್ರೆ ಅವರನ್ನು ಸದನದಿಂದ ಅಮಾನತು ಮಾಡಿಸುವುದು
* ಬಜೆಟ್ಗೆ ಅಂಗೀಕಾರ ಆಗುವವರೆಗೆ ಸದನಕ್ಕೆ ಬಾರದಂತೆ ತಡೆಯುವುದು
* ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ, ಬಿಜೆಪಿಯ 3-4 ಶಾಸಕರಿಂದ ರಾಜೀನಾಮೆ ಕೊಡಿಸಿ ಅವರ ಬಲ ಕುಗ್ಗಿಸುವುದು
* ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು
ಬಿಜೆಪಿ ನಡೆ ಏನು?
* ಬಜೆಟ್ ಮಂಡನೆ ವೇಳೆ 20 ನಿಮಿಷಗಳು ಧರಣಿ ನಡೆಸುವುದು
* ಬಳಿಕ ಕುಮಾರಸ್ವಾಮಿ ಬಜೆಟ್ ಭಾಷಣ ಆಲಿಸುವುದು
* ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸುವುದು
* ಬಜೆಟ್ಗಿಂತ ಶಾಸಕರ ರಾಜೀನಾಮೆಯೇ ಸುದ್ದಿಯಾಗುವಂತೆ ಮಾಡುವುದು
* ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸದಿದ್ದರೆ ರಾಜ್ಯಪಾಲರ ಎದುರು ಪರೇಡ್ ಮಾಡಿಸುವುದು
ರಾಜೀನಾಮೆ ನೀಡ್ತಾರಾ?
ಕಾಂಗ್ರೆಸ್ನ ಹಿರಿಯ ನಾಯಕರು ಹತ್ತು ಹಲವು ಸಲ ಎಚ್ಚರಿಕೆ ನೀಡಿದರೂ ಐವರು ಅತೃಪ್ತ ಶಾಸಕರು ವಿಧಾನಸೌಧದತ್ತ ಮುಖ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿವೆ. ಒಂದುವ ವೇಳೆ ಸಭೆಗೆ ಹಾಜರಾಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಪಕ್ಷಾಂತರ ನಿಷೇಧ ಕಾನೂನಿನಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ(ಗೋಕಾಕ್), ನಾಗೇಂದ್ರ(ಬಳ್ಳಾರಿ), ಗಣೇಶ್(ಕಂಪ್ಲಿ), ಮಹೇಶ್ ಕುಮಟಳ್ಳಿ(ಅಥಣಿ), ಉಮೇಶ್ ಜಾಧವ್(ಚಿಂಚೋಳಿ), ನಾರಾಯಣಗೌಡ (ಕೆ.ಆರ್ ಪೇಟೆ), ಬಿ.ಸಿ. ಪಾಟೀಲ್(ಹಿರೇಕೆರೂರು) ಶಾಸಕಾಂಗ ಸಭೆಗೆ ಗೈರಾಗುವ ಸಾಧ್ಯತೆಯಿದೆ.