ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್ಶೀಟ್ ರಿಲೀಸ್ ಮಾಡ್ತೀವಿ ಅಂತ ಬಂದ ಬಿಜೆಪಿ ನಾಯಕರೇ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ಇಂದು ನಡೆದ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ಹಳೇ ಹಗರಣದ ಬಗ್ಗೆ ಮತ್ತೆ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಈ ದಾಖಲೆಗಳೆಲ್ಲಾ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಪ್ರಶ್ನಿಸಿದ ಕೂಡಲೇ ಈಶ್ವರಪ್ಪ ಪತ್ರಿಕಾಗೋಷ್ಠಿಯಿಂದ ಹೊರನಡೆದರು.
ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಪುಟ್ಟಸಾಮಿ, ಕಾಂಗ್ರೆಸ್ನ 30 ಸಚಿವರ ವಿರುದ್ಧವೂ 30 ಹಗರಣಗಳ ದಾಖಲೆ ಇದೆ. ಅವುಗಳನ್ನು ಹಂತ ಹಂತವಾಗಿ ಬಡುಗಡೆಗೊಳಿಸುವುದಾಗಿ ತೇಪೆ ಹಚ್ಚೋ ಕೆಲಸ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಇನ್ನೆರಡು ದಿನದಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಹಗರಣ ಬಯಲು ಮಾಡುತ್ತಾರೆ. ಕಾಂಗ್ರೆಸ್ನ 20 ರಿಂದ 25 ಹಗರಣಗಳು ಇದ್ದು, ದಿನಕ್ಕೆ ಮೂರರಂತೆ ಬಿಡುಗಡೆಗೊಳಿಸಲಾಗುವುದು. ಅದಕ್ಕೆ ಸಿದ್ದರಾಮಯ್ಯ ಉತ್ತರ ನೀಡಲೇಬೇಕು ಅಂತ ಹೇಳಿದರು.