ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕೋಟೆನಾಡು ಸಜ್ಜಾಗಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಎಂದೂ ಮರೆಯದಂತಹ ಉಡುಗೊರೆ ನೀಡಲು ಚಿತ್ರದುರ್ಗ ಬಿಜೆಪಿ ಘಟಕ ರೆಡಿ ಆಗಿದೆ.
ನರೇಂದ್ರ ಮೋದಿ ಅವರಿಗೆ ಬಿಜೆಪಿ ಘಟಕ ಮಧ್ಯ ಕರ್ನಾಟಕದ ಪವಾಡ ಪುರುಷ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮಾದರಿ ಉಡುಗೊರೆ ನೀಡಲಿದೆ. ತಿಪ್ಪೇರುದ್ರಸ್ವಾಮಿ ಮಾಡಿದಷ್ಟು ನೀಡು ಭಿಕ್ಷೆ ಎಂಬ ಸಂದೇಶವನ್ನು ಸಾರಿದ್ದರು.
ಕಮಲದ ಕಸೂತಿ ಇರುವ ಬಿಳಿ ಕಂಬಳಿಯಿಂದ ಸನ್ಮಾನ ಮಾಡಲಾಗುತ್ತದೆ. ಬರದನಾಡಲ್ಲಿ ಬೆಳೆಯುವ ಮೆಣಸಿನಕಾಯಿ ಸಸಿ, ಬದನೆ ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲು ತಯಾರಿ ನಡೆಸಿದ್ದಾರೆ. 6 ಟ್ರೇಗಳಲ್ಲಿ ಸಸಿಗಳನ್ನಿಟ್ಟು ನೀರೆರೆಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇರುವ ಉಪಾಧ್ಯ ಹೋಟೆಲ್ನಲ್ಲಿ ಮೋದಿ ದೋಸೆ ಸವಿಯಲಿದ್ದಾರೆ. ಸದ್ಯ ಮೋದಿ ಅವರ ಆಗಮನಕ್ಕಾಗಿ ಮುರುಘಾ ರಾಜೆಂದ್ರ ಕ್ರೀಡಾಂಗಣ ಸಜ್ಜಾಗಿದೆ. ಸ್ಟೇಡಿಯಂ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಗರದ ಹೊರವಲಯದಲ್ಲೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳ ಜನರು ಭಾಗಿಯಾಗಲಿದ್ದಾರೆ.