ಬೆಂಗಳೂರು: ಎಚ್ಡಿ ಕುಮಾರಸ್ವಾಮಿಯವರಿಗೆ ಆತ್ಮರತಿ ಹೆಚ್ಚಾಗಿದ್ದು, ಜಂತಕಲ್ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.
ತನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರಣ ಎಂದು ಎಚ್ಡಿ ಕುಮಾರಸ್ವಾಮಿ ಆರೋಪಿಸಿದ ಬಳಿಕ ತೇಜಸ್ವಿನಿ ಗೌಡ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ವಾಗ್ದಾಳಿ ನಡೆಸಿ ಪ್ರತ್ಯುತ್ತರ ನೀಡಿದ್ದಾರೆ.
ಮಾಜಿ ಸಿಎಂ ಆಗಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಅವರು ಮರೆತಿದ್ದಾರೆ. ಹಿಟ್ ಅಂಡ್ ರನ್ ಮಾಡುವುದರಲ್ಲಿ ಕುಮಾರಸ್ವಾಮಿ ಎಕ್ಸ್ ಪರ್ಟ್. ಉಪಚುನಾವಣೆಗೆ ಅವರು ಅಭ್ಯರ್ಥಿಗಳನ್ನು ಹಾಕುವುದಿಲ್ಲ. ಬೇಕಾದಾಗ ಕಾಂಗ್ರೆಸ್ ಜೊತೆ ಸೇರುತ್ತಾರೆ. ಯಡಿಯೂರಪ್ಪ ಸುದೀರ್ಘ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾದವರು. ಅದ್ರೆ ಎಚ್ಡಿಕೆ ರಾತ್ರೋ ರಾತ್ರಿ ಮುಖ್ಯಮಂತ್ರಿಯಾದವರು. ಬಾಹುಬಲಿ, ಬಾಹುಬಲಿ 2 ನೋಡಿದ್ದೇವೆ. ಅದರೆ ಇವರ ಮೇಲೆ ಆರೋಪ ಮಾಡಲು ತುಂಬಾ ಸ್ಟೋರಿಗಳಿವೆ ಎಂದು ಆರೋಪಿಸಿದರು.
ಎಚ್ಡಿಕೆಯನ್ನು ಕಟ್ಟಪ್ಪನಿಗೆ ಹೋಲಿಕೆ ಮಾಡಿದ ಅವರು, 8 ಮಂದಿ ಸ್ನೇಹಿತರಿಗೇ ಅವರು ವಿಶ್ವಾಸದ್ರೋಹ ಮಾಡಿದ್ದಾರೆ. ತಮ್ಮ ಪುತ್ರರ ರಾಜಕೀಯ ಯಶಸ್ಸಿಗಾಗಿ ಯಾರನ್ನ ಬೇಕಾದ್ರೂ ಪಕ್ಷದಿಂದ ಹೊರಹಾಕ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಹೇಡಿತನದ ರಾಜಕಾರಣ ಮಾಡದೇ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ: ಬಿಎಸ್ವೈಗೆ ಎಚ್ಡಿಕೆ ಸವಾಲು