ಬೆಂಗಳೂರು: ಪಂಚ ಗ್ಯಾರಂಟಿಗಳು (Congress Guarantee) ಪಂಚರ್ ಆಗಿ ವರ್ಷಗಳೇ ಕಳೆದಿವೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಕಾಂಗ್ರೆಸ್ ಸಾಧನಾ ಸಮಾವೇಶದ (Congress Sadhana Samavesha) ವಿಚಾರಕ್ಕೆ ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ನ (Congress) ಸಾವಿರ ದಿನಗಳ ಸಾಧನಾ ಸಮಾವೇಶದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ, ಮೋದಿ ಸರ್ಕಾರದ್ದು ಕಾಯಕವೇ ಕೈಲಾಸ ನೀತಿ. ಸಿದ್ದರಾಮಯ್ಯ ಅವರದ್ದು ಜನರಿಗೆ ಕಾಯಿಸುವುದೇ ಕೈಲಾಸ ನೀತಿಯಾಗಿದೆ. ಅವರ ಯೋಜನೆಗಳು ರಾಜ್ಯದ ಜನರಿಗೆ ಕಾಯುವುದೇ ಕೈಲಾಸ ಅನ್ನುವ ರೀತಿ ಸತಾಯಿಸ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾವಿರ ದಿನಗಳಲ್ಲಿ ಸಾವಿರಾರು ಹಗರಣಗಳ ಸರದಾರ ಸಿಎಂ: ಆರ್.ಅಶೋಕ್
ರಾಜ್ಯವನ್ನು ಸಿದ್ದರಾಮಯ್ಯ (Siddaramaiah) ಕುಡುಕರ ರಾಜ್ಯ ಮಾಡ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿಗೆ ಅಪಮಾನ ಮಾಡಲಾಗ್ತಿದೆ. ನೂರು ಸುಳ್ಳು ಹೇಳಿ ಮದುವೆ ಮಾಡು ಎನ್ನುವಂತೆ ಸಾವಿರ ಸುಳ್ಳು ಹೇಳಿ ನಾಡಿನ ಜನರಿಗೆ ಅನ್ಯಾಯ ಎಸಗಿದ್ದಾರೆ. ಅಹಿಂದ ಹೆಸರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಒಕ್ಕಲಿಗ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ.
ರಾಮರಾಜ್ಯ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದು, ಜನರ ಕಿವಿಗೆ ಹೂ ಮುಡಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣ, ಅಬಕಾರಿ, ಸ್ಮಾರ್ಟ್ ಮೀಟರ್ ಹಗರಣ, ಗೃಹಲಕ್ಷ್ಮಿ ಹಗರಣ, ಮುಡಾ ಹಗರಣಗಳನ್ನು ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂ. ಎಲ್ಲಿಗೆ ಹೋಗಿದೆ ಅಂತ ಸಿಎಂ ಇನ್ನೂ ಉತ್ತರ ಕೊಟ್ಟಿಲ್ಲ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಕಾಂಗ್ರೆಸ್ ಹೈಕಮಾಂಡ್ಗೆ ರಾಜ್ಯವನ್ನು ಸರ್ಕಾರ ಅಡ ಇಟ್ಟಿದೆ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿಗಳಿಂದ ಜನರ ಸಬಲೀಕರಣ ಆಗಿದೆ ಅಂತ ಬಡಾಯಿ ಕೊಚ್ಚಿ ಕೊಳ್ತಾರೆ. ರಸ್ತೆ ಗುಂಡಿಗಳನ್ನು ಮುಚ್ಚಲೂ ಈ ಅಯೋಗ್ಯ ಕಾಂಗ್ರೆಸ್ ಸರ್ಕಾರದಿಂದ ಆಗಿಲ್ಲ. ಇವರ ಸಾಧನೆ ಅಂದ್ರೆ ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ಕೊಟ್ಟಿರೋದು. ಈ ಕಾಂಗ್ರೆಸ್ ಸರ್ಕಾರ ಕಳೆದ ಎರಡೂಮುಕ್ಕಾಲು ವರ್ಷದಲ್ಲಿ ಓಲೈಕೆ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡ್ತಿದೆ. ಅಭಿವೃದ್ಧಿ ದೂರದೃಷ್ಟಿ ಇಲ್ಲದೇ 25 ವರ್ಷ ಕೆಳಗೆ ರಾಜ್ಯ ಹೋಗಿದೆ ಎಂದಿದ್ದಾರೆ.
ಕಾಂಗ್ರೆಸ್ನವರು ವೈಫಲ್ಯ, ಭ್ರಷ್ಟಾಚಾರ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರ ಎಲ್ಲ ವರ್ಗದ ಜನರಿಗೆ ಘೋರ ಅನ್ಯಾಯ ಮಾಡಿದೆ. ಇಲಾಖೆಗಳಿಗೆ ಕೇಂದ್ರದ ವಿಶೇಷ ಅನುದಾನ ಕೊಟ್ಟೇ ಇಲ್ಲ. ಅನುದಾನ ಕೊಡದಿದ್ರೂ ಆ ಇಲಾಖೆಗಳ ಮೇಲೆ ಒತ್ತಾಯ ಹಾಕಿ ನಕಲಿ ಯುಟಿಲೈಸೇಷನ್ ಸರ್ಟಿಫಿಕೇಟ್ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಸಿಎಂ, ಡಿಸಿಎಂ ಉತ್ತರಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಇಸಿಜಿಯಲ್ಲಿ ವ್ಯತ್ಯಾಸ – ಶಾಸಕ ಬೈರತಿ ಬಸವರಾಜ್ಗೆ ಜಯದೇವದಲ್ಲಿ ಆಂಜಿಯೋಗ್ರಾಂ?

