ಬೆಂಗಳೂರು: ಯಡಿಯೂರಪ್ಪನವರ ಸರ್ಕಾರ ಭದ್ರವಾಯ್ತು, ಮುಂದೇನು? ಗೆದ್ದವರಿಗೆ ಮಂತ್ರಿ ಅಂದಿದ್ದು ಆಯ್ತು, ಆದ್ರೆ ಯಾವಾಗ? ಸದ್ಯ ಬಿಜೆಪಿ ಹೈಕಮಾಂಡ್ ಹತ್ತಿರ ಬಿಎಸ್ವೈ ಹೋಗಲ್ಲವಾ? ಈ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಹೊಸ ವರ್ಷದಲ್ಲೇ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮಾತುಕತೆಗೆ ಹೈಕಮಾಂಡ್ ಇನ್ನೂ ಟೈಂ ಕೂಡ ಫಿಕ್ಸ್ ಮಾಡಿಲ್ಲ. ಹಾಗಾಗಿ ಯಡಿಯೂರಪ್ಪ ಸಹ ಬೇರೆ ಸಮಯ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 21, 22ಕ್ಕೆ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುತ್ತಿಲ್ಲ. ಡಿಸೆಂಬರ್ 22ರಿಂದ ಶಿವಮೊಗ್ಗ ಪ್ರವಾಸ ಕೈಗೊಳ್ಳುವ ಯಡಿಯೂರಪ್ಪನವರು ಡಿಸೆಂಬರ್ 26ರಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹಾಗಾಗಿ ಬಿಎಸ್ವೈ ಈ ವರ್ಷ ಹೈಕಮಾಂಡ್ ಭೇಟಿ ಮಾಡುವುದು ಅನುಮಾನ. ಹೊಸ ವರ್ಷದ ನಂತರವೇ ಹೈಕಮಾಂಡ್ ಭೇಟಿಗೆ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಜಾರ್ಖಂಡ್ ಚುನಾವಣೆ ರಿಸಲ್ಟ್ ಆಗಬೇಕು, ಪೌರತ್ವ ಕಾವು ಇಳಿಯಬೇಕು. ಅಲ್ಲಿಯವರೆಗ ಅಮಿತ್ ಶಾ ಮತ್ತು ಮೋದಿ ಅವರ ಜೊತೆಗಿನ ಭೇಟಿ ಅನುಮಾನ ಅಂತಾ ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಹೊಸ ವರ್ಷದ ಮೊದಲ ವಾರ ಯಡಿಯೂರಪ್ಪನವರು ದೆಹಲಿಗೆ ಹೋದರೂ ಕ್ಯಾಬಿನೆಟ್ ವಿಸ್ತರಣೆ ಸಂಕ್ರಾಂತಿ ಬಳಿಕ ಎನ್ನಲಾಗುತ್ತಿದೆ. ವಿಧಾನಸಭೆ ಜಂಟಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಪ್ಲಾನ್ ಮಾಡಿದ್ದು, ಜನವರಿ 15 ರಿಂದ 20ರೊಳಗೆ ಸಂಪುಟ ವಿಸ್ತರಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಜನವರಿ 20ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ.