ಬೆಂಗಳೂರು: ನನ್ನ ಕಂಡೀಷನ್ಗೆ ಮಾತ್ರ ನಾನು ಓಕೆ..! ಇದನ್ನ ಹೇಳಿರೋರು ಬೇರೆ ಯಾರೂ ಅಲ್ಲ. ಅವರೇ ಸಿಎಂ ಯಡಿಯೂರಪ್ಪ ಅವರು. 6 ಸಚಿವ ಸ್ಥಾನ ತುಂಬುವ ಸೂತ್ರಕ್ಕೆ ಹೈಕಮಾಂಡ್ಗೆ ಚಕ್ರವ್ಯೂಹ ಹೆಣೆದಿದ್ದಾರೆ. ರಾಜಾಹುಲಿಯ ಚಾಣಕ್ಯ ನಡೆಯಿಂದ ಯಾರಿಗೇ ಎಷ್ಟು ಲಾಭ-ನಷ್ಟ ಅನ್ನೋ ಕುತೂಹಲ ಗರಿಗೆದರಿದೆ. ನಿಮ್ ಸೂತ್ರಕ್ಕೆ ನನ್ ಕಂಡೀಶನ್ ಅಸಲಿ ಇನ್ ಸೈಡ್ ಸ್ಟೋರಿ ಬಗ್ಗೆಯೇ ಈಗ ದೊಡ್ಡ ಚರ್ಚೆ.
ಅಂದಹಾಗೆ ಬಜೆಟ್ಗೂ ಮುನ್ನ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಹೈಕಮಾಂಡ್ ಸಲಹೆಗೆ ಸಿಎಂ ಯಡಿಯೂರಪ್ಪ ಅವರು ಬತ್ತಳಿಕೆಯಿಂದ ಕಂಡೀಶನ್ ಅಸ್ತ್ರ ಪ್ರಯೋಗವಾಗಿದೆ ಅನ್ನೋದು ಲೇಟೆಸ್ಟ್ ಸುದ್ದಿ. ವಲಸಿಗ ಹಕ್ಕಿಗಳಿಗೆ ಸರಿಯಾದ ಗೂಡು ಭದ್ರವಾದರೆ ಮಾತ್ರ 6 ಸ್ಥಾನಗಳನ್ನು ತುಂಬಲು ಯಡಿಯೂರಪ್ಪ ಒಪ್ಪಿಗೆ ಸೂಚಿಸುತ್ತಾರೆ ಅಂತಾ ಆಪ್ತ ವಲಯ ಹೇಳಿದೆ. ಹಾಗಾಗಿಯೇ ಸೋತಿರುವ ಹೆಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ಕೊಡಬೇಕು.
ಮುನಿರತ್ನ, ಪ್ರತಾಪಗೌಡ ಪಾಟೀಲ್, ಆರ್.ಶಂಕರ್ ಅವರಿಗೂ ಸಚಿವ ಸ್ಥಾನ ಭದ್ರಪಡಿಸಬೇಕು. ಯಾರೂ ಏನೇ ಅನ್ನಲಿ ಜೂನ್ ಬಳಿಕ ಈ ಐದು ಜನರಿಗೆ ಸ್ಥಾನಮಾನ ಕಲ್ಪಿಸಬೇಕು. ಹಾಗಾದ್ರೆ ಮಾತ್ರ ಬಜೆಟ್ಗೂ ಮುನ್ನ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಿಬಿಡ್ತೀನಿ. ನೀವು ಹೇಳಿದಂತೆ 6 ಸಚಿವ ಸ್ಥಾನಗಳನ್ನು ತುಂಬಿಬಿಡ್ತೀನಿ ಅಂತಾ ಬಿಜೆಪಿ ಹೈಕಮಾಂಡ್ಗೆ ಸಿಎಂ ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರಂತೆ.
ಇನ್ನೊಂದೆಡೆ ಜೂನ್ ಬಳಿಕ ಪುನಾರಚನೆ ಪಕ್ಕಾ ಆಗ್ಬೇಕು ಅನ್ನೋದು ಯಡಿಯೂರಪ್ಪ ಅವರ ವಾದ ಎನ್ನಲಾಗಿದೆ. ಪುನಾರಚನೆಯ ಸಂದರ್ಭದಲ್ಲಿ ಮೊದಲ ಹಂತದಲ್ಲಿ ಕ್ಯಾಬಿನೆಟ್ಗೆ ಸೇರಿದವರ ಕಾರ್ಯವೈಖರಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನದಲ್ಲಿ ಪಾಸ್ ಆದವರನ್ನ ಸಂಪುಟದಲ್ಲಿ ಇರಿಸಿಕೊಳ್ಳಿ, ಫೇಲ್ ಆದವರನ್ನ ಸಂಪುಟದಿಂದ ಕೈ ಬಿಡಬಹುದು. ಹೈಕಮಾಂಡ್ ಇದಕ್ಕೆ ಬದ್ಧವಾದ್ರೆ ನನ್ನದೇನೂ ತಕರಾರಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.