ಕೊಪ್ಪಳ: ಮುಸ್ಲಿಂ ಧರ್ಮದವರು ಕೂಡ ಭಾರತೀಯರೇ ಎನ್ನುವುದನ್ನು ಬಿಜೆಪಿ ಮರೆತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಕೊಲೆಗಾರ, ಕುರುಬ ಬಾಂಧವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಮಹಾನ್ ಪೆದ್ದ, ಅವರ ಮಿದುಳಿಗೂ ನಾಲಿಗೆಗೂ ಹಿಡಿತ ತಪ್ಪಿದೆ. ಗಾಂಧಿಯನ್ನು ಕೊಂದವರಿಂದ ಇಂತಹ ಮಾತು ಬರುತ್ತದೆ. ಈ ಪಕ್ಷದವರಾದ ಈಶ್ವರಪ್ಪ ಅವರಿಂದ ಒಳ್ಳೆಯ ಮಾತು ಬರಲ್ಲ. ಈಶ್ವರಪ್ಪನ ಬಗ್ಗೆ ಬಿಟ್ಟು ಬೇರೇ ಕೇಳಿ, ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮುಸ್ಲಿಮರ ಪರ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಮುಸ್ಲಿಮರು ಭಾರತದವರೇ ಎನ್ನುವುದನ್ನು ಮರೆತು ಬಿಟ್ಟಿದೆ. ಆ ಧರ್ಮ ಬೇಡ, ಈ ಧರ್ಮ ಬೇಡ ಅಂದರೆ ಹೇಗೆ? ಮತ್ತೆ ಯಾಕೆ ಬಿಜೆಪಿ ಅವರು ಭಾರತ್ ಮಾತಾ ಕೀ ಜೈ ಎನ್ನುತ್ತಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಹಾಸನ, ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲುತ್ತಾರೆ ಎಂದಿದ್ದಕ್ಕೆ, ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಸನ, ಕಲಬುರಗಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಕರೆದುಕೊಂಡು ನಿಲ್ಲಿಸಿದ್ದಾರೆ. ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿ ಅಷ್ಟೊಂದು ದುರ್ಬಲವಾಗಿದೆ ಎಂದು ಟೀಕಿಸಿದರು.