– ಕಾಂಗ್ರೆಸ್ ಭದ್ರಕೋಟೆ ರಾಯ್ಬರೇಲಿಗೆ ಪ್ರತಾಪ್ ಸಿಂಗ್ ಬಿಜೆಪಿ ಅಭ್ಯರ್ಥಿ
ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಹಾಗೂ ಡಬ್ಲ್ಯೂಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಅವರ ಪುತ್ರನಿಗೆ ಬಿಜೆಪಿ (BJP) ಟಿಕೆಟ್ ನೀಡಿದೆ.
ಉತ್ತರ ಪ್ರದೇಶದ ಕೈಸರ್ಗಂಜ್ನಿಂದ (Kaiserganj) ಬಿಜೆಪಿ ಅಭ್ಯರ್ಥಿಯಾಗಿ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಬ್ರಿಜ್ ಭೂಷಣ್ ಹಿರಿಯ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಶಾಸಕರಾಗಿದ್ದಾರೆ. ಕರಣ್ ಭೂಷಣ್ ಸಿಂಗ್ ಪ್ರಸ್ತುತ ಉತ್ತರ ಪ್ರದೇಶದ ಕುಸ್ತಿ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮಾಡಲು ಸಾಕಷ್ಟು ಕೆಲಸಗಳಿವೆ: ಕುಸ್ತಿ ಫೆಡರೇಷನ್ನಿಂದ ಬ್ರಿಜ್ ಭೂಷಣ್ ‘ಸನ್ಯಾಸತ್ವ’
ಕರಣ್ ಭೂಷಣ್ ಸಿಂಗ್ (Karan Bhushan Singh) ಹೆಸರನ್ನು ಘೋಷಿಸುವುದರ ಜೊತೆಗೆ, ಬಿಜೆಪಿಯು ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯಿಂದ ಪ್ರತಾಪ್ ಸಿಂಗ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಹಾಲಿ ಸಂಸದರಾಗಿ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳಿಂದಾಗಿ ಭಾರೀ ರಾಜಕೀಯ ಹಿನ್ನಡೆ ಅನುಭವಿಸಿದರು. ಇವರ ವಿರುದ್ಧ ದೇಶದ ಕೆಲ ಪ್ರಮುಖ ಕುಸ್ತಿಪಟುಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ಆಪ್ತನಿಗೆ ಕುಸ್ತಿ ಅಧ್ಯಕ್ಷ ಪಟ್ಟ – ವಿರೋಧಿಸಿ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ
ಸಿಂಗ್ ಮೇಲಿರುವ ಗಂಭೀರ ಆರೋಪಗಳ ಕಾರಣದಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಬೇರೊಬ್ಬರ ಆಯ್ಕೆ ಮಾಡಲು ತೀರ್ಮಾನಿಸಿತು. ಆದರೆ ಈ ಭಾಗದಲ್ಲಿ ಬ್ರಿಜ್ ಭೂಷಣ್ ಸಿಂಗ್ ಹೊಂದಿರುವ ರಾಜಕೀಯ ಪ್ರಭಾವ ಪಕ್ಷಕ್ಕೆ ತಿಳಿದಿದೆ. ಹೀಗಾಗಿ ಅವರ ಸ್ಥಾನಕ್ಕೆ ಮಗನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಕೈಸರ್ಗಂಜ್ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮೇ 20 ರಂದು ಮತದಾನ ನಡೆಯಲಿದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!