ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಲೋಕಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದ್ದಾರೆ. ತುಮಕೂರು (Tumkur) ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಅವರು 1,75,594 ಮತಗಳ ಅಂತರದಲ್ಲಿ ಗೆದ್ದಿದ್ದು, ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.
ಸೋಮಣ್ಣ 7,20,946 ಮತಗಳಿಸಿದ್ದು, ಕಾಂಗ್ರೆಸ್ (Congress) ಅಭ್ಯರ್ಥಿ ಮುದ್ದುಹನುಮೇಗೌಡ ಅವರು 5,45,352 ಮತಗಳಿಸಿದ್ದರು. ಈ ಮೂಲಕ ಭಾರೀ ಅಂತರದ ಮೂಲಕ ಅವರು ಕೈ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಮಣ್ಣ ತುಮಕೂರಿನ ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಗೆಲುವನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಅವಕಾಶ ಕೊಟ್ಟರು ಅವರಿಗೆ ಹಾಗೂ ಯಡಿಯೂರಪ್ಪಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ನನ್ನ ಆರಾಧ್ಯ ದೈವ ಶಿವಕುಮಾರ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಮತ್ತೆ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ದೇಶದ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹೆಚ್ಚಿಗೆ ದುಡಿದ ಪರಿಣಾಮ ಗೆಲುವು ಸಾಧಿಸಿದ್ದೇನೆ. ದೇಶದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಇದಕ್ಕೆ ಇಂಡಿಯಾ ಒಕ್ಕೂಟದ ಅಪಪ್ರಚಾರ ಕಾರಣ ಎಂದು ಅವರು ದೂರಿದ್ದಾರೆ.