ಗಾಂಧಿನಗರ: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್ನತ್ತ ತನ್ನ ಗಮನವನ್ನು ಹರಿಸಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ರೊಂದಿಗೆ ಕೇಜ್ರಿವಾಲ್ ಶನಿವಾರ ಅಹಮದಾಬಾದ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಬಳಿಕ ಎಎಪಿ ತಿರಂಗ ಯಾತ್ರೆ (ರೋಡ್ಶೋ) ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಗುಜರಾತ್ನಲ್ಲಿ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ಇಲ್ಲಿನ ಭ್ರಷ್ಟಾಚಾರ ಇಂದಿನವರೆಗೂ ಕೊನೆಯಾಗಿಲ್ಲ. ನಾನು ಯಾವುದೇ ಪಕ್ಷವನ್ನು ಟೀಕಿಸಲು ಇಲ್ಲಿಗೆ ಬಂದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಅನ್ನು ಸೋಲಿಸುವುದೂ ನನ್ನ ಗುರಿಯಲ್ಲ. ನಾನಿಲ್ಲಿಗೆ ಬಂದಿರುವ ಉದ್ದೇಶ ಗುಜರಾತ್ ಅನ್ನು ಗೆಲ್ಲಿಸುವುದು, ಗುಜರಾತಿಗಳನ್ನು ಗೆಲ್ಲಿಸುವುದು ಹಾಗೂ ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಎಂದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್
25 ವರ್ಷಗಳ ಅಧಿಕಾರದ ಬಳಿಕ ಬಿಜೆಪಿ ದುರಹಂಕಾರದಿಂದ ಕೂಡಿದೆ. ಇನ್ನು ಮುಂದೆ ಅವರು ಜನರ ಮಾತು ಕೇಳುವುದಿಲ್ಲ. ದೆಹಲಿಯ ಜನರು ಆಮ್ ಆದ್ಮಿಗೆ ಅವಕಾಶ ನೀಡಿದ್ದಾರೆ. ಬಳಿಕ ಪಂಜಾಬ್ ಕೂಡಾ ಆಮ್ ಆದ್ಮಿಗೆ ಅವಕಾಶ ನೀಡಿದೆ. ಇದೀಗ ನಿಮ್ಮ ಸರದಿ. ನಮಗೆ ಒಂದು ಬಾರಿ ಅವಕಾಶ ನೀಡಿ. ಒಂದು ವೇಳೆ ನಿಮಗೆ ನಮ್ಮ ಆಡಳಿತ ಇಷ್ಟವಾಗಿಲ್ಲ ಎಂದರೆ ಮುಂದಿನ ಬಾರಿ ಬದಲಾಯಿಸಿ. ನೀವು ಒಂದು ಸಲ ಎಎಪಿ ಪಕ್ಷಕ್ಕೆ ಅವಕಾಶ ನೀಡಿದರೆ ಉಳಿದ ಎಲ್ಲಾ ಪಕ್ಷಗಳನ್ನು ಮರೆತುಬಿಡುತ್ತೀರಿ ಎಂದು ಕೇಜ್ರಿವಾಲ್ ಭಾಷಣದಲ್ಲಿ ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್
ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಅಧಿಕಾರ ಗಟ್ಟಿಸಿಕೊಂಡಿರುವ ಎಎಪಿ ಇದೀಗ ಪಕ್ಕದ ಗುಜರಾತ್ ಕಡೆ ತನ್ನ ದೃಷ್ಟಿ ನೆಟ್ಟಿದೆ. ಮುಂಬರುವ ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿ ಈಗಿನಿಂದಲೇ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದೆ.