ಹರಹರ ಮಹಾದೇವ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಯ್ ಗೌಡ (Vinay Gowda), 4ನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಯಸದೇ ಬಳಿ ಬಂದೆ ಹಾಡಿನ ಮೂಲಕ ವೇದಿಕೆಗೆ ಬಂದ ವಿನಯ್ ಗೌಡ, ತಮ್ಮ ತಂದೆಯೊಂದಿಗಿನ ನೋವಿನ ಸಂಗತಿಯನ್ನು ಹಂಚಿಕೊಂಡರು.
14 ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಕ್ಷಣ ಭಾವುಕರಾದರು. ಪತ್ನಿ ಮತ್ತು ಮಗ ಕೂಡ ಈ ಕ್ಷಣದಲ್ಲಿ ಭಾವುಕತೆಯಿಂದಲೇ ವಿನಯ್ ಗೌಡ ಅವರನ್ನು ದೊಡ್ಮನೆಗೆ ಕಳುಹಿಸಿ ಕೊಟ್ಟರು. ವಿನಯ್ ಗೌಡ ಈವರೆಗೂ ಮನೆಗೆ ಹೋದವರ ಪೈಕಿ ಅತೀ ಹೆಚ್ಚು ಅಂದರೆ, ಶೇಕಡಾ 84ರಷ್ಟು ವೋಟು ಪಡೆದುಕೊಂಡು ಆಯ್ಕೆಯಾದರು.
ಮೂರನೇ ಸ್ಪರ್ಧಿ
ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ್ಯಾಪರ್ ಇಶಾನಿ (Ishani). ಮೈಸೂರು ಮೂಲದ ಈ ಹುಡುಗಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್ನಲ್ಲಿ ಬೆಳೆದವರು. ರ್ಯಾಪರ್ ಆಗಿ ಅನೇಕ ಗೀತೆಗಳನ್ನು ಇವರು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.
ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ರಂಜಿಸಿದರು. ನಾಲ್ವರು ನಿರ್ಣಾಯಕರು ಇಶಾನಿಗೆ ಶೇಕಡಾ 83 ರಷ್ಟು ವೋಟು ಹಾಕುವ ಮೂಲಕ ಇಶಾನಿಯನ್ನು ಆಯ್ಕೆ ಮಾಡಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.
ಎರಡನೇ ಸ್ಪರ್ಧಿ
ಬಿಗ್ ಬಾಸ್ (Bigg Boss Kannada) ಮನೆಗೆ ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಪ್ರವೇಶ ಮಾಡಿದ್ದರು. ಎರಡನೇ ಸ್ಪರ್ಧಿಯಾಗಿ ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ಸ್ನೇಹಿತ್ ಗೌಡ (Snehith Gowda) ಎಂಟ್ರಿ ಕೊಟ್ಟಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯ ಹಿನ್ನೆಲೆ ಈ ಯುವ ನಟನಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. ಸ್ನೇಹಿತ್ ಗೌಡ ಅವರಿಗೆ ದೊಡ್ಮನೆ ಪ್ರವೇಶ ಮಾಡಲು ಶೇಕಡಾ 81ರಷ್ಟು ವೋಟು ಪಡೆದು ಆಯ್ಕೆಯಾದರು.
‘ನಿನ್ನ ಕಂಡ ಕ್ಷಣದಿಂದ ಹಾಡಿನ ಮೂಲಕ ವೇದಿಕೆ ಪ್ರವೇಶ ಮಾಡಿದ ಸ್ನೇಹಿತ್ ಗೌಡ, ದೊಡ್ಮನೆಯ ಬಾಗಿಲು ತೆರೆದುಕೊಂಡು ಹೋಗುವಾಗ ಸುದೀಪ್ ನೀಡಿದ ಕಾಫಿ ಪೌಡರ್ ತೆಗೆದುಕೊಂಡು ಹೋದರು. ಮನೆಗೆ ಬರುವ ಸ್ಪರ್ಧಿಗಳಿಗೆ ನಮತ್ರಾ ಮತ್ತು ಸ್ನೇಹಿತ್ ಒಟ್ಟಾಗಿ ಕಾಫಿ ಮಾಡಿಕೊಡುವ ಮತ್ತು ಕಾಫಿ ಕುಡಿಯದೇ ಇರುವ ಸ್ನೇಹಿತ್ ಕೂಡ ಕಾಫಿ ಕುಡಿಯುವಂತೆ ಸುದೀಪ್ ವಾರ್ನ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.
ಮೊದಲ ಸ್ಪರ್ಧಿ ನಮ್ರತಾ
ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ (Namrata Gowda), ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ನಾಗಿಣಿ 2 ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಇವರು. ತಂದೆ, ತಾಯಿ ಮತ್ತು ಕುಟುಂಬ ಈ ಸಂದರ್ಭದಲ್ಲಿ ಹಾಜರಿತ್ತು. ತಾವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಬಂದೆ ಎನ್ನುವ ಕುರಿತು ನಮ್ರತಾ ಗೌಡ ಮಾತನಾಡಿದರು. ನಿರ್ಣಾಯಕರಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಒಟ್ಟಾರೆ ಶೇಕಡಾ 86ರಷ್ಟು ವೋಟ್ ಪಡೆದುಕೊಂಡು ಆಯ್ಕೆಯಾದರು.
ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳಗೆ ಹೋದ ನಮ್ರತಾ ಗೌಡ ಅವರಿಗೆ ಸ್ಪೆಷಲ್ ಕೆಲಸವನ್ನು ನೀಡಿದರು ಸುದೀಪ್ (Sudeep). ಮೊದಲ ಕಂಟೆಸ್ಟೆಂಟ್ ಆಗಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಹಾಲು ಉಕ್ಕಿಸುವಂತೆ ಹೇಳಿದರು. ನಮತ್ರಾ ಮನೆಯೊಳಗೆ ಕಾಲಿಟ್ಟು ಹಾಲು ಉಕ್ಕಿಸುವ ಮೂಲಕ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ‘ಊರಿಗೊಬ್ಬಳೆ ಪದ್ಮಾವತಿ’ ಹಾಡಿನ ಮೂಲಕ ವೇದಿಕೆಗೆ ಬಂದ ನಮ್ರತಾ, ಹಲವಾರು ವಿಚಾರಗಳನ್ನು ಹಂಚಿಕೊಂಡರು.
Web Stories